ಮೂಡಿಗೆರೆ: ಎತ್ತಿನಭುಜ ಮೀಸಲು ಅರಣ್ಯ ಪ್ರದೇಶವಾಗಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಂದ 250 ರೂ. ಶುಲ್ಕ ಸಂಗ್ರಹಿಸುವ ಜತೆಗೆ ಪ್ರವಾಸಿಗರು ಉಚಿತವಾಗಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸದಂತೆ ಅರಿವು ಮೂಡಿಸಲಾಗುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ವಿ.ಎಂ.ಅಮರ್ ಅಕ್ಷರ್ ಹೇಳಿದರು.
ತಾಪಂನಲ್ಲಿ ಮಂಗಳವಾರ ಕರೆದಿದ್ದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಪ್ರವಾಸಿಗರಿಂದ ಸಂಗ್ರಹಿಸಿದ ಹಣವನ್ನು ಪ್ರವಾಸೋದ್ಯಮ ಇಲಾಖೆಗೆ ಜಮಾಮಾಡಲಾಗುವುದು. ಅದರಲ್ಲಿ 150 ರೂ. ಪ್ರವಾಸೋದ್ಯಮ ಇಲಾಖೆಗೆ, ಉಳಿದ 100 ರೂ.ವನ್ನು ಅರಣ್ಯ ಇಲಾಖೆಗೆ ವಾಪಸ್ ಪಡೆದು ಎತ್ತಿನಭುಜ ಪ್ರದೇಶದಲ್ಲಿ ಮೂಲ ಸೌಕರ್ಯ ಒದಗಿಸಲು ಬಳಸಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಗ್ರಾಪಂ ಅನುಮತಿ ಪಡೆಯದೆ ಶುಲ್ಕ ವಸೂಲಿ ಮಾಡಬಾರದು. ಆ ಭಾಗದ ಸ್ಥಳೀಯ ನಿವಾಸಿಗಳಿಗೆ ಗುರುತಿನ ಚೀಟಿ ನೀಡಿ ಉಚಿತವಾಗಿ ಚಾರಣಕ್ಕೆ ಅವಕಾಶ ನೀಡಬೇಕು ಎಂದು ತಾಪಂ ಅಧ್ಯಕ್ಷ ಕೆ.ಸಿ.ರತನ್ ಸೂಚಿಸಿದರು.