ಮಂಗಳೂರು: ಬೀಡಿ ಕಾರ್ಮಿಕರ ದಾರುಣವಾದ ಬದುಕು, ಬದುಕುವ ಹಕ್ಕು ಗಮನದಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಬಲವಾದ ಕಾನೂನು ರಚನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕರ್ನಾಟಕ ಕರಾವಳಿ ಬೀಡಿ ಕೆಲಸಗಾರರ ಸಂಘ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಬೀಡಿ ಕಂಟ್ರಾಕ್ಟರ್ದಾರರ ಸಂಘದ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ಬೀಡಿ ಕೆಲಸಗಾರರ ಸಮ್ಮೇಳನದ ಉದ್ಘಾಟನೆ ಹಾಗೂ ಸಂಶೋಧನಾ ಪುಸ್ತಕ ‘ಬೀಡಿ ಬದುಕು’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಬೀಡಿ ಉದ್ಯಮ ದೊಡ್ಡ ಶಕ್ತಿ ನೀಡಿದೆ. ಆದರೆ ಅಸಂಖ್ಯಾತ ಸಂಖ್ಯೆಯಲ್ಲಿ ಇರುವ ಬೀಡಿ ಕಾರ್ಮಿಕರ ಆದಾಯದ ಶೇ.50 ಭಾಗ ಅವರ ಕುಟುಂಬದ ಸದಸ್ಯರ ರೋಗರುಜಿನಗಳ ನಿರ್ವಹಿಸಲು ಹೋಗುತ್ತದೆ. ಇಲಾಖೆಯ ಕಾರ್ಮಿಕರ ನಿಧಿ ತುಂಬಿ ತುಳುಕಾಡುತ್ತಿದ್ದು, ಈ ನಿಧಿಯ ಶೇ.75 ಭಾಗ ಕಾರ್ಮಿಕರ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಿಗಾಗಿಯೇ ವ್ಯಯವಾಗುವಂತೆ ಸರ್ಕಾರ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಮುಖ್ಯ ಅತಿಥಿ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ಬೀಡಿ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಒಂದೇ ಕಡೆ ಪಡೆಯಲು ಸಾಧ್ಯವಾಗುವಂತೆ ಪ್ರತ್ಯೇಕ ನಿಗಮ ಮಾಡುವುದರಿಂದ ಹೆಚ್ಚಿನ ಅನುಕೂಲ ಸಾಧ್ಯಬಾಗಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ವೇದವ್ಯಾಸ ಕಾಮತ್, ಬೀಡಿ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನಿಡಿದರು.
ಜಾತ್ಯತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಬೀಡಿ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕೆ.ಎಸ್. ಇಸ್ಮಾಯಿಲ್, ಸಂಜೀವ, ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ, ಕೋಶಾಧಿಕಾರಿ ಇಸ್ಮಾಯಿಲ್, ಕಾಳಿದಾಸ ಮುಂತಾದವರನ್ನು ಉಪಸ್ಥಿತರಿದ್ದರು.
ಎಚ್ಎಂಎಸ್ ರಾಜ್ಯ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಕರ್ನಾಟಕ ಕರಾವಳಿ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ ಪ್ರಸ್ತಾವನೆಗೈದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.