ಹೈದರಾಬಾದ್: ಈಗ ಜಗವೆಲ್ಲಾ ಕರೊನಾಮಯವಾಗಿದೆ. ಎಲ್ಲಿ ಕೇಳಿದರೂ ಕರೊನಾ ಹೆಸರೇ ಕಿವಿಗೆ ಬೀಳುತ್ತಿದೆ. ಅಷ್ಟರಮಟ್ಟಿಗೆ ಈ ಮಹಾಮಾರಿ ಆತಂಕ ಸೃಷ್ಟಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ನಡುವೆಯೇ ಹೈದರಬಾದ್ ಮೂಲದ ವ್ಯಕ್ತಿಯೊಬ್ಬ ವಿನೂತನ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾರೆ.
ಕರೊನಾ ಕುರಿತು ಅರಿವು ಮೂಡಿಸಲು ಕೆ. ಸುಧಾಕರ್ ಎಂಬುವರು ಕರೊನಾ ಮಾದರಿಯಲ್ಲೇ ಕಾರೊಂದನ್ನು ತಯಾರಿಸಿದ್ದಾರೆ. ಸುಧಾಕರ್ ಅವರು ಸುಧಾ ಕಾರ್ಸ್ ಹೆಸರಿನ ಚಮತ್ಕಾರಿ ಮ್ಯೂಸಿಯಂ ನಡೆಸುತ್ತಿದ್ದು, ಬುಧವಾರ ಕರೊನಾ ಕಾರನ್ನು ಬಿಡುಗಡೆ ಮಾಡಿದ್ದಾರೆ.
ವಿಭಿನ್ನ ಪ್ರಯತ್ನದ ಬಗ್ಗೆ ಅನಿಸಿಕೆ ತಿಳಿಸಿರುವ ಸುಧಾಕರ್, ಕರೊನಾ ಕುರಿತು ಅರಿವು ಮೂಡಿಸಿ, ಮನೆಯಲ್ಲೇ ಉಳಿಯುವಂತೆ ಜನರನ್ನು ಹುರಿದುಂಬಿಸಲು ಈ ಕರೊನಾ ಕಾರನ್ನು ತಯಾರಿಸಿದ್ದೇನೆ. ಮನೆಯಿಂದಾಚೆಗೆ ಬರದೆ ಸುರಕ್ಷಿತವಾಗಿ ಉಳಿಯಿರಿ ಎಂಬ ಸಂದೇಶವನ್ನು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.
ಒಂದೇ ಆಸನ ವ್ಯವಸ್ಥೆಯುಳ್ಳ ಕಾರಿಗೆ 100 ಸಿಸಿ ಇಂಜಿನ್ ಇದೆ. ಆರು ಚಕ್ರವಿದ್ದು, ಫೈಬರ್ ಬಾಡಿಯನ್ನು ಹೊಂದಿದೆ. ಕಾರು ತಯಾರಿಸಲು 10 ದಿನಗಳು ತೆಗೆದುಕೊಂಡಿತು. ಈ ಕಾರು ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಎನ್ನುತ್ತಾರೆ ಸುಧಾಕರ್.
ಜನರಲ್ಲಿ ಅರಿವು ಮೂಡಿಸಲು ಕಾರನ್ನು ಹೈದರಾಬಾದ್ ಪೊಲೀಸರಿಗೆ ಕೊಡುಗೆಯಾಗಿ ಸುಧಾಕರ್ ನೀಡಲಿದ್ದಾರೆ. ಸಾಮಾಜಿಕ ಸಂದೇಶಕ್ಕಾಗಿ ಕಾರು ತಯಾರಿಸುವುದು ಸುಧಾಕರ್ಗೆ ಹೊಸದೇನಲ್ಲ. ವಿಶ್ವದ ಬಹುದೊಡ್ಡ ಟ್ರೈಸೈಕಲ್ ವಿನ್ಯಾಸಗೊಳಿಸಿದ ಗಿನ್ನೆಸ್ ವಿಶ್ವ ದಾಖಲೆ ಈಗಾಗಲೇ ಸುಧಾಕರ್ ಅವರ ಹೆಸರಿನಲ್ಲಿದೆ.
ವಿವಿಧ ಸಂದರ್ಭದಲ್ಲಿ ವಿವಿಧೋದ್ದೇಶಕ್ಕಾಗಿ ಯಾವಾಗಲೂ ಈ ರೀತಿಯ ಕಾರು ತಯಾರಿಸಿ ಮರಳಿ ಅದನ್ನು ಸಮಾಜಕ್ಕೆ ನೀಡುತ್ತೇನೆ ಎಂದು ಸುಧಾಕರ್ ತಿಳಿಸುತ್ತಾರೆ. ಈ ಹಿಂದೆ ಪಕ್ಷಿಗಳನ್ನು ಪಂಜರದಲ್ಲಿ ಇಡಬೇಡಿ ಎಂಬ ಸಂದೇಶ ಸಾರಲು ಕೇಜ್ ಕಾರು ಹಾಗೂ ಏಡ್ಸ್ ಕುರಿತು ಜಾಗೃತಿ ಮೂಡಿಸಲು ಕಾಂಡೋಮ್ ಬೈಕ್ ಮತ್ತು ರಸ್ತೆ ಸುರಕ್ಷತೆ ಬಗ್ಗೆ ತಿಳಿಸಲು ಹೆಲ್ಮೆಟ್ ಕಾರನ್ನು ಸುಧಾಕರ್ ತಯಾರಿಸಿದ್ದರು.
ಅಟೊಮೋಬೈಲ್ಸ್ನ ಬಿಡಿ ಭಾಗಗಳನ್ನು ಬಳಸಿಕೊಂಡು ಈ ರೀತಿಯ ಕಾರುಗಳನ್ನು ಸುಧಾಕರ್ ತಯಾರಿಸುತ್ತಾರೆ. ಆದರೆ, ಇವುಗಳನ್ನು ನಿಧಾನಗತಿ ವೇಗದಲ್ಲಿ ಮಾತ್ರ ಚಾಲನೆ ಮಾಡಬೇಕು. ನೆಹರೂ ಮೃಗಾಲಯ ಬಳಿಯ ಮ್ಯೂಸಿಯಂನಲ್ಲಿ ಇವುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. (ಏಜೆನ್ಸೀಸ್)
ನನಗೆ ಗೌರವ ಸೂಚಿಸುವ ಬದಲು ಬಡ ಕುಟುಂಬಗಳ ಜವಾಬ್ದಾರಿ ವಹಿಸಿಕೊಳ್ಳಿ: ಪ್ರಧಾನಿ ಮೋದಿ ಸಲಹೆ
ಕರೊನಾದಿಂದ ಬಚಾವ್ ಆದ ಬಾಬಿ ಡಾಲ್ ಸಿಂಗರ್ ಕನ್ನಿಕಾ ಕಪೂರ್ಗೆ ಮತ್ತೊಂದು ಸಂಕಷ್ಟ!