ಹೂವಿನಹಡಗಲಿ: ಜನರ ಮತ್ತು ಸಮಾಜದ ಅಭಿವೃದ್ಧಿಗೆ ವಿಜ್ಞಾನ ಬಳಕೆ ಆಗಬೇಕು ಎಂದು ಗಣಿತ ಶಿಕ್ಷಕ ಸಂಗಮೇಶ ಸುಂಕದ ಪ್ರಸಾದ್ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಫೆ. 28 ರಂದು ವಿಶ್ವಕ್ಕೆ ಸಂಶೋಧನೆ ಮಾಡಿದ ಗೌರವಾರ್ಥ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಅನ್ನ, ನೀರು, ಆಹಾರ, ಆರೋಗ್ಯ, ವಸತಿ, ವಸ್ತ್ರ ಹೀಗೆ ಮಾನವನ ಮೂಲ ಸೌಕರ್ಯಗಳನ್ನು ಒದಗಿಸುವುದು ವಿಜ್ಞಾನದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ ಎಂದರು.
ಮುಖ್ಯಶಿಕ್ಷಕ ಸುರೇಶ ಅಂಗಡಿ ಮಾತನಾಡಿ, ಮೇಡಂ ಕ್ಯೂರಿ, ಥಾಮಸ್ ಆಲ್ವಾ ಎಡಿಸನ್, ಸಿ.ವಿ.ರಾಮನ್, ಸರ್ ಐಸಾಕ್ ನ್ಯೂಟನ್ ಮೊದಲಾದ ಮಹಾನ್ ವಿಜ್ಞಾನಿಗಳ ಹಾದಿಯಲ್ಲಿ ಮಕ್ಕಳು ಸಾಗಬೇಕು ಎಂದರು. ಚಿತ್ರಕಲಾ ಶಿಕ್ಷಕರಾದ ದ್ವಾರಕೀಶ್ ರೆಡ್ಡಿ ವಿಜ್ಞಾನ ದಿನಾಚರಣೆ ಕುರಿತು ಮಾಹಿತಿ ನೀಡಿದರು.