ಹೂವಿನಹಡಗಲಿ: ಕುಟುಂಬದಲ್ಲಿ ಬೆಳೆಯುವ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸಬೇಕು ಎಂದು ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲವೀರಪಜ್ಜ ಸ್ವಾಮೀಜಿ ಹೇಳಿದರು.
ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಹಾಲಸ್ವಾಮಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಮಠವು ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುತ್ತ ಬಂದಿದೆ. ಅನೇಕ ಬಡಕುಟುಂಬಗಳಿಗೆ ಇರುವ ಆರ್ಥಿಕ ಹೊರೆಯನ್ನು ತಗ್ಗಿಸುವಂತಹ ಕೆಲಸವನ್ನು ಸಾಮೂಹಿಹ ವಿವಾಹ ಮಾಡುತ್ತದೆ. ಇಂಥ ಕಾರ್ಯಕ್ರಮದಲ್ಲಿ ಸತಿ-ಪತಿಯಾದ ದಂಪತಿಗಳು ತಮ್ಮ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸಬೇಕು. ಧಾರ್ಮಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳ ಅರಿವು ಮೂಡಿಸಬೇಕು ಎಂದರು.
15 ಜೋಡಿಗಳು ನವಜೀವನಕ್ಕೆ ಕಾಲಿಟ್ಟವು. ಪ್ರಶಸ್ತಿ ಪುರಸ್ಕೃತ ಯುವಕಲಾವಿದ ಶಿವಕುಮಾರ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ನಂದಿಪುರದ ಮಹೇಶ್ವರ ಸ್ವಾಮೀಜಿ, ಕೊಟ್ಟೂರು ಚಾನುಕೋಟೆಮಠದ ಸಿದ್ದಲಿಂಗ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣ ಹಾಲಸಿದ್ದೇಶ್ವರ ಸ್ವಾಮೀಜಿ, ಅಮೃತೇಶ್ವರ ಸ್ವಾಮೀಜಿ, ವಿಶ್ವಾರಾಧ್ಯ ಸ್ವಾಮೀಜಿ, ದೊಡ್ಡಹಾಲ ಸ್ವಾಮೀಜಿ, ಅಭಿಷೇ ಕ ಹಾಲಸ್ವಾಮೀಜಿ, ಉಮಾಪತಿ ಪಂಡಿತರಾಧ್ಯ ಸ್ವಾಮೀಜಿ, ಅಳವಂಡಿ ಮರುಳರಾಧ್ಯ ಸ್ವಾಮೀಜಿ ಇತರರು ಇದ್ದರು.