ಹುನಗುಂದ: ರಾಜ್ಯ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕೆಂದು ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮುಖಂಡ ಮಹಾಂತೇಶ ಹೊಸಮನಿ ಮಾತನಾಡಿ, ಕರೊನಾ ಲಾಕ್ಡೌನ್ ಹಿನ್ನೆಲೆ 42 ದಿನ ಮದ್ಯ ಮಾರಾಟವನ್ನು ಸಂಪೂರ್ಣ ನಿಲ್ಲಿಸಿದ ವೇಳೆ ಅನೇಕ ಕುಟುಂಬಗಳು ಉತ್ತಮ ಜೀವನ ನಡೆಸಲು ಸಾಧ್ಯವಾಗಿತ್ತು. ಮತ್ತೆ ಮದ್ಯದ ಅಂಗಡಿ ಪ್ರಾರಂಭಿಸಿದ್ದರಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಕರೊನಾ ಸೋಂಕು ಲೆಕ್ಕಿಸದೆ ಬಾರ್ಗಳ ಮುಂದೆ ಮದ್ಯ ಕುಡಿಯಲು ಬಡಿದಾಡುತ್ತಿದ್ದಾರೆ ಎಂದು ಹೇಳಿದರು.
ಗೀತಾ ಬುರ್ಲಿ ಮಾತನಾಡಿ, ರಾಜ್ಯಗಳಲ್ಲಿ ಮದ್ಯ ಸೇವನೆ ಕಡಿಮೆ ಮಾಡಲು ಸಂವಿಧಾನದ ಅನುಚ್ಚೇದ 47ರಲ್ಲಿ ರಾಜ್ಯಗಳಿಗೆ ನೀಡಲಾದ ನಿರ್ದೇಶನದಂತೆ ಸರ್ಕಾರದ ನೀತಿ ಜಾರಿಗೊಳಿಸಬೇಕು. ಅಲ್ಲಿವರೆಗೂ ಕರ್ನಾಟಕದಲ್ಲಿ ಮದ್ಯ ಮಾರಾಟ ನಿಲ್ಲಿಸಬೇಕು. ಪ್ರತಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮದ್ಯ ವರ್ಜನ ಕೇಂದ್ರಗಳನ್ನು ತೆಗೆಯಬೇಕು. ಅತಿಯಾಗಿ ಕುಡಿತಕ್ಕೊಳಗಾದ ವ್ಯಕ್ತಿಗಳನ್ನು ಗುರುತಿಸಿ ಮದ್ಯ ವರ್ಜನ ಕೇಂದ್ರಗಳಿಗೆ ಸೇರಿಸಬೇಕು ಎಂದು ಹೇಳಿದರು.
ಸೈರಾಬಾನು ಹಿರೇಮನಿ, ಸೌಮ್ಯ ವಟವಟಿ, ಯಮನೂರ ಮಾದರ, ಎಸ್.ಎಂ. ಭದ್ರಶೆಟ್ಟಿ, ಎಸ್.ಬಿ. ಪರನಗೌಡ್ರ ಇನ್ನು ಅನೇಕರು ಇದ್ದರು.