More

    ಹುಳಿಯಾರು ಮುಖ್ಯಾಧಿಕಾರಿಗೆ ಕ್ಲಾಸ್ ; ಪಟ್ಟಣ ಪಂಚಾಯಿತಿ ಮೊದಲ ಸಾಮಾನ್ಯಸಭೆಯಲ್ಲೇ ಗಲಾಟೆ

    ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ 2 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಧ್ಯಕ್ಷ ಕೆ.ಎಂ.ಎಲ್.ಕಿರಣ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಕರೆಯಲಾಯಿತ್ತು. ಸಭೆಯ ಆರಂಭದಿಂದ ಕೊನೆಯವರೆಗೂ ಉಡಾಫೆ ಉತ್ತರ ಕೊಡುವ, ಕರ್ತವ್ಯ ಲೋಪ ಎಸಗಿರುವ, ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ವಿಫಲರಾಗಿರುವ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಅಮಾನತು ಮಾಡುವಂತೆ ಅಧ್ಯಕ್ಷರಾದಿಯಾಗಿ, ಸರ್ವಸದಸ್ಯರೂ ಪಟ್ಟು ಹಿಡಿದರು.

    ಅಧ್ಯಕ್ಷ ಕಿರಣ್ ಕುಮಾರ್ ಅವರೇ ಮುಖ್ಯಾಧಿಕಾರಿ ವಿರುದ್ಧ ಆರೋಪ ಮಾಡಿದರಲ್ಲದೆ ಅನೇಕ ಬಾರಿ ಏರಿದ ಧ್ವನಿಯಲ್ಲಿ ತರಾಟೆಗೂ ತೆಗೆದುಕೊಂಡರು. ಸಭೆಯ ಆರಂಭದಲ್ಲೇ ಅಕ್ಟೋಬರ್‌ನ ಜಮೆಖರ್ಚು ಅಂಗೀಕರಿಸುವ ವಿಚಾರದಲ್ಲಿ ಯಗಚಿ ಟ್ರೇಡರ್ಸ್‌ನ 18,260 ರೂ. ಬಿಲ್ ಯಾವ ಉದ್ದೇಶಕ್ಕೆ ವೆಚ್ಚ ಮಾಡಲಾಗಿದೆ ಎಂದು ಸದಸ್ಯ ಜಹೀರ್ ಸಾಬ್ ಹಾಗೂ ದಸ್ತುಗಿರಿಸಾಬ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಮುಖ್ಯಾಧಿಕಾರಿಯಾದಿಯಾಗಿ ಸಿಬ್ಬಂದಿಯೂ ತಡವರಿಸಿದರು. ಬಿಲ್ ತರಿಸಿದರೆ ಎಲ್ಲ ತಿಳಿಯುತ್ತೆ ಎಂದು ಬಿಲ್ ತರಲು ಅಧ್ಯಕ್ಷರು ಸೂಚಿಸಿದರೆ, ಅಚ್ಚರಿ ಎನ್ನುವಂತೆ ಮೊದಲು ಬಿಲ್ ಕಲೆಕ್ಟರ್ ಹೋದರು, ಹತ್ತದಿನೈದು ನಿಮಿಷಗಳಾದರೂ ಬಾರದಿದ್ದಾಗ ಪರಿಸರ ಅಧಿಕಾರಿ ಹೋದರು, ನಂತರ ಇಂಜಿನಿಯರ್, ಕೊನೆಗೆ ಮುಖ್ಯಾಧಿಕಾರಿಗಳೂ ಹೋದರು. ಹೀಗೆ ಸಭೆಯಲ್ಲಿದ್ದ ಪಪಂ ಸಿಬ್ಬಂದಿ ಹೋದರೂ ಬಿಲ್ ಪ್ರತಿ ತರಲಿಲ್ಲ. ಹೀಗೆ ಒಂದೂವರೆ ಗಂಟೆ ಬಿಲ್ ಹುಡುಕಲು ಸಮಯ ವ್ಯರ್ಥ ಮಾಡಿದರು.

    ಅಂತಿಮವಾಗಿ ಅಧ್ಯಕ್ಷರು, ಸದಸ್ಯರು ಏರು ಧ್ವನಿಯಲ್ಲಿ ಬೇಗ ಬರುವಂತೆ ಗಲಾಟೆ ಮಾಡಿದಾಗ ಮುಖ್ಯಾಧಿಕಾರಿಗಳು ಓಡೋಡಿ ಬಂದು, ಇದೊಂದು ಬಿಲ್ ಪ್ರತಿ ಮಿಸ್ ಆಗಿದೆ. ಸಮಯಾವಕಾಶ ಕೊಟ್ಟರೆ ಹುಡುಕಿ ಕೊಡುತ್ತೇನೆ ಎಂದರಲ್ಲದೆ ದುಡ್ಡನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ನ್ಯಾಯಯುತವಾಗಿ ಖರ್ಚು ಮಾಡಿದ್ದೇನೆ ಎಂದರು. ಇದರಿಂದ ಆಕ್ರೋಶಗೊಂಡ ಸದಸ್ಯರು, ಎರಡ್ಮೂರು ವರ್ಷಗಳ ಲೆಕ್ಕಪತ್ರ ತನಿಖೆ ಮಾಡುವಂತೆಯೂ ಪಟ್ಟು ಹಿಡಿದು ಠರಾವು ಬರೆಸಿದರು.

    ನವೆಂಬರ್ ಜಮೆಖರ್ಚು ಮಂಡಿಸುವಾಗ ಪಂಚಾಯಿತಿ ಮಳಿಗೆಗಳ ಬಾಡಿಗೆ ಬಾಬ್ತು 10 ಸಾವಿರ ರೂ. ಜಮೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಸದಸ್ಯ ಎಸ್‌ಆರ್‌ಎಸ್ ದಯಾನಂದ್ ಅಕ್ಟೋಬರ್‌ನಲ್ಲಿ ಒಂದು ರೂಪಾಯಿ ಬಾಡಿಗೆ ಬಂದಿಲ್ಲ. 52 ವಾಣಿಜ್ಯ ಮಳಿಗೆಗಳಿದ್ದು ಇಷ್ಟು ಕಮ್ಮಿ ಬಾಡಿಕೆ ಏಕೆ ಕಟ್ಟಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು.

    ಬಾಡಿಗೆದಾರರೇ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡುತ್ತಿದ್ದು ಒಬ್ಬೊಬ್ಬರು 3 ಸಾವಿರ ರೂಪಾಯಿಯಂತೆ ಕಟ್ಟುತ್ತಿದ್ದಾರೆ. ಬಾಕಿ ಉಳಿಸದಂತೆ ಅಡ್ವಾನ್ಸ್ ಬಾಡಿಗೆೆ ಹಾಕುತ್ತಿದ್ದಾರೆ ಎಂದು ಸಿಬ್ಬಂದಿ ಪ್ರದೀಪ್ ಉತ್ತರಿಸಿದರು. ಯಾವ ಮಾನದಂಡದಲ್ಲಿ 3 ಸಾವಿರ ರೂ.ಕಟ್ಟಿಸಿಕೊಳ್ಳುತ್ತಿದ್ದೀರಿ ಎಂದು ಸದಸ್ಯ ಸಿದ್ದಿಕ್ ಹಾಗೂ ಜಬೇರ್ ತರಾಟೆಗೆ ತೆಗೆದುಕೊಂಡರು.

    ಅವರೇ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಕಟ್ಟುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ದಾಖಲೆ ತೋರಿಸಿದರು. ಇಷ್ಟಕ್ಕೇ ಸಮಾಧಾನವಾಗದ ಸದಸ್ಯರು ನೀವೇ ಹೇಳಿ ಬಾಡಿಗೆ ಹೆಚ್ಚು ಮಾಡಿ ಹಣ ಕಟ್ಟಿಸಿಕೊಂಡು ಸದಸ್ಯರ ಹಕ್ಕಿಗೆ ಚ್ಯುತಿ ತಂದಿದ್ದೀರಿ. ಹಾಗಾಗಿ ಮುಖ್ಯಾಧಿಕಾರಿ ಅಮಾನತು ಮಾಡುವುದು ಸೂಕ್ತ ಎಂದು ಅನುಮೋದಿಸಿದರು.

    ಸಭೆಯಲ್ಲಿದ್ದ ಬಿಲ್‌ಕಲೆಕ್ಟರ್‌ಗಳು ನಾಪತ್ತೆ: ಡಿಸಿ ಅಪ್ರೂವಲ್ ಇಲ್ಲದ ನಿವೇಶನವನ್ನು ಖಾತೆ ಮಾಡುವುದಿಲ್ಲ ಎನ್ನುವವರು 2018-19ನೇ ಸಾಲಿನಲ್ಲಿ ರಂಗಯ್ಯ ಎಂಬುವವರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸದಸ್ಯೆ ರತ್ನಮ್ಮ ದಾಖಲೆ ಸಹಿತ ಸಭೆಯ ಗಮನಕ್ಕೆ ತಂದರು. ಇದಕ್ಕೆ ಅನೇಕ ಸದಸ್ಯರು ಮಧ್ಯವರ್ತಿಗಳ ಮೂಲಕ ಹಣ ಪಡೆದು ಖಾತೆ ಮಾಡಿಕೊಡುತ್ತಿದ್ದು ಸದಸ್ಯರು ಕೇಳಿದರೆ ಕಾನೂನುಪಾಠ ಮಾಡುತ್ತಾರೆ ಎಂದು ಆರೋಪಿಸಿದರು. ಇದಕ್ಕೆ 2015-16ನೇ ಸಾಲಿನಲ್ಲಿ ಖಾತೆಯಾಗಿದ್ದು ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಮುಖ್ಯಾಧಿಕಾರಿ ಪ್ರತ್ಯುತ್ತರ ನೀಡಿದರು. ಆಗ ಅಧ್ಯಕ್ಷರು 2015ರ ಸಾಲಿನಲ್ಲಿದ್ದ ಪಿಡಿಒ ಸಿದ್ಧರಾಮಯ್ಯ ಅವರನ್ನು ಸಭೆ ಕರೆದು ಸಮಜಾಯಿಷಿ ಕೇಳಿದರು. ಆಗ ಸಿದ್ದರಾಮಯ್ಯ ಅವರು ಪಂಚಾಯಿತಿಯಲ್ಲಿ ನನ್ನ ಸಹಿ ೆರ್ಜರಿ ಮಾಡಿ ಅರವತ್ತಕ್ಕೂ ಹೆಚ್ಚು ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಸ್ಫೋಟಕ ಮಾಹಿತಿ ನೀಡಿದಾಗ ಸಭೆ ಅಲ್ಲೋಲ ಕಲ್ಲೊಲವಾಯಿತು. ಇದೂವರೆಗೂ ಸಭೆಯಲ್ಲಿದ್ದ ಬಿಲ್ ಕಲೆಕ್ಟರ್‌ಗಳಿಬ್ಬರೂ ೆನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾದರು.

    ದಾಖಲೆ ಕಳೆದಿದ್ದಕ್ಕೆ ಕೇಸ್ ದಾಖಲಿಸಿ: ಈ ರೀತಿ ೆರ್ಜರಿ ಮಾಡಿ ನಕಲಿ ಖಾತೆ ಮಾಡಿರುವವ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹೇಮಂತ್, ಗೀತಾಬಾಬು, ಹೇಮಂತ್, ಪ್ರಶ್ನಿಸಿದರು. ಎಂಆರ್ ಪುಸ್ತಕ ತನ್ನಿ ಎಂದು ಪಟ್ಟು ಹಿಡಿದರು. ಆದರೆ 2015-16ನೇ ಸಾಲಿನ ಎಂಆರ್ ಬುಕ್ ಪಿಡಿಒ ನಮಗೆ ಹಸ್ತಾಂತರಿಸಿಲ್ಲ. ಫೋರ್ಜರಿ ಮಾಡಿರುವ ಆರೋಪ ಮಾಡುತ್ತಿರುವವರು ಕೇಸ್ ದಾಖಲಿಸಬೇಕೆ ವಿನಃ ನಾವಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದರು. ಇದಕ್ಕೆ ರಾಜು ಬಡಗಿ ಅವರು ದಾಖಲೆಗಳನ್ನು ಕಳೆದಿರುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಒತ್ತಾಯಿಸಿದರು.

    ಸಭೆ ಮುಂದೂಡಿಕೆ: ನನಗೆ ಅವಮಾನ ಮಾಡಲೆಂದೇ ಇಂತಹ ವರ್ತನೆ ತೋರುತ್ತಿದೀರಾ ಎಂದು ರೊಚ್ಚಿಗೆದ್ದ ಅಧ್ಯಕ್ಷ ಕಿರಣ್ ಕುಮಾರ್ ೆ.15ಕ್ಕೆ ಸಭೆ ಮುಂದೂಡಿದರು. ಅಂದಿನ ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಬರಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts