ಹುಬ್ಬಳ್ಳಿ: ಇಲ್ಲಿನ ಅಕ್ಷಯ ಕಾಲನಿಯ ಮನೆಯೊಂದರಲ್ಲಿ ಕುಳಿತು ಎಕ್ಕ-ರಾಜ-ರಾಣಿ ಎಲೆ ತಟ್ಟುತ್ತಿದ್ದ ಪೊಲೀಸ್ ಅಧಿಕಾರಿ- ಸಿಬ್ಬಂದಿ ತಂಡದ ಮೇಲೆ ಪೊಲೀಸರೇ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ ಅಪರೂಪದ ಪ್ರಕರಣ.
ಹೌದು, ಇದು ಬೇಲಿಯೇ ಎದ್ದು ಹೊಲ ಮೇಯ್ದಂಥ ಪ್ರಕರಣ. ಜೂಜುಕೋರರ ವಿರುದ್ಧ ಸಮರ ಸಾರಬೇಕಿದ್ದ ಶಿಸ್ತಿನ ಇಲಾಖೆಯ ಸಿಪಾಯಿಗಳೇ ಇಲ್ಲಿ ಶಿಸ್ತು ಮರೆತು ಇಸ್ಪೀಟ್ ಜೂಜಾಡುತ್ತಿದ್ದರು. ಗುಂಪು ಸೇರಿ ಅಂದರ್- ಬಾಹರ್ ಆಟದಲ್ಲಿ ಮೈಮರೆತಿದ್ದರು.
ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್)ಯ ಓರ್ವ ಇನ್ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್ಟೆಬಲ್ಗಳು, ಓರ್ವ ಕಾನ್ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್ಸ್ಟೆಬಲ್ಗಳಿದ್ದ ಐವರ ತಂಡ ಅಕ್ಷಯ ಕಾಲನಿ ಎರಡನೇ ಹಂತದ ಮನೆ ಸಂಖ್ಯೆ 337ರಲ್ಲಿ ಶುಕ್ರವಾರ ರಾತ್ರಿ ಇಸ್ಪೀಟ್ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಪೊಲೀಸ್ ಆಯುಕ್ತ ಲಾಭೂರಾಮ ಅವರ ಸೂಚನೆ ಹಿನ್ನೆಲೆಯಲ್ಲಿ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿಚಿರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ದಾಳಿಯಲ್ಲಿ ಸಿಎಆರ್ನ ಇಬ್ಬರು ಹೆಡ್ ಕಾನ್ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್ಸ್ಟೆಬಲ್ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್ಸ್ಟೆಬಲ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದಲ್ಲೂ ನಡೆದಿತ್ತು
ಕಳೆದ ಎರಡು, ಮೂರು ವರ್ಷಗಳ ಹಿಂದೆ ಧಾರವಾಡದಲ್ಲೂ ಇಸ್ಪೀಟ್ ಆಡುತ್ತಿದ್ದ ಪೊಲೀಸ್ ತಂಡದ ಮೇಲೆ ಪೊಲೀಸ್ ದಾಳಿ ನಡೆದಿತ್ತು. ಆ ವೇಳೆ ಹಲವು ಅಧಿಕಾರಿ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈಗ ಬಂಧಿಸಲ್ಪಟ್ಟ ತಂಡದವರು ನಿತ್ಯ ಆ ಮನೆಯಲ್ಲಿ ಸೇರುತ್ತಿದ್ದರು. ಯಾವುದೇ ಅಂಜಿಕೆ ಅಳುಕಿಲ್ಲದೇ ಜೂಜಾಡುತ್ತಿದ್ದರು. ಈ ಹಿಂದೆಯೂ ಒಂದು ಬಾರಿ ಪೊಲೀಸರ ಕೈಗೆ ಸಿಕ್ಕಿದ್ದರು. ಆದರೆ, ಯಾವುದೋ ಕಾರಣದಿಂದ ತಪ್ಪಿಸಿಕೊಂಡಿದ್ದರು. ಆದರೆ, ಈ ಬಾರಿ ಹಾಗೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆರ್ಪಿಐ ಪರಾರಿ
ಜೂಜಾಡುತ್ತಿದ್ದ ತಂಡದಲ್ಲಿ ಇದ್ದ ಒಬ್ಬ ಸಿಎಆರ್ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ (ಸಿಎಆರ್) ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂಜಾಟದಲ್ಲಿ ಭಾಗಿಯಾಗಿದ್ದವರು ಯಾರೇ ಇರಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕಾನೂನು ಎಲ್ಲರಿಗೂ ಒಂದೇ ಅದರಲ್ಲಿ ಎರಡು ಮಾತಿಲ್ಲ.
> ಲಾಭೂರಾಮ, ಪೊಲೀಸ್ ಆಯುಕ್ತ