ಹುಬ್ಬಳ್ಳಿ: ರಸ್ತೆಬದಿ ನಿಂತಿದ್ದ ಲಾರಿಗೆ ಎರಡು ಬೈಕ್ಗಳು ಏಕಕಾಲಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮೇಲಿದ್ದ ಮೂವರು ಮೃತಪಟ್ಟು, ಮತ್ತೋರ್ವ ಗಾಯಗೊಂಡ ಭೀಕರ ಅಪಘಾತ ಪುಣೆ- ಬೆಂಗಳೂರು ಬೈಪಾಸ್ ತಾರಿಹಾಳ ಬಳಿಯ ಮೆಹಬೂಬ ಡಾಬಾ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ.
ಸೆಟ್ಲಮೆಂಟ್ ನಿವಾಸಿಗಳಾದ ಸುನೀಲ ಭಜಂತ್ರಿ (25), ಮಂಜುನಾಥ ಕ್ಯಾರಕಟ್ಟಿ (35) ಹಾಗೂ ವಿನೋದ ಕ್ಯಾರಕಟ್ಟಿ (30) ಮೃತಪಟ್ಟಿದ್ದಾರೆ. ಪರಶುರಾಮ ನಿಟ್ಟೂರ ಗಾಯಗೊಂಡಿದ್ದಾರೆ.
ಗಾಮನಗಟ್ಟಿಯಲ್ಲಿ ಗೌಂಡಿ ಕೆಲಸ ಮುಗಿಸಿಕೊಂಡು ನಾಲ್ವರೂ ಎರಡು ಬೈಕ್ನಲ್ಲಿ ಸೆಟ್ಲಮೆಂಟ್ ಕಡೆಗೆ ಬರುತ್ತಿದ್ದರು. ಈ ವೇಳೆ ಚಾಲಕ ಇಸ್ಮಾಯಿಲ್ ಎಂಬಾತ ರಸ್ತೆಬದಿ ಲಾರಿ ನಿಲ್ಲಿಸಿದ್ದ. ಇದನ್ನು ಗಮನಿಸದೇ ಬೈಕ್ ಚಾಲಕರು ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುನೀಲ ಮತ್ತು ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿಮ್ಸ್ಗೆ ದಾಖಲಾಗಿದ್ದ ವಿನೋದ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಗಾಯಾಳು ಪರಶುರಾಮಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ದಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು. ಜಖಂಗೊಂಡಿದ್ದ ಎರಡು ಬೈಕ್, ಲಾರಿ ವಶಕ್ಕೆ ಪಡೆದಿದ್ದಾರೆ.
ಒಂದೇ ದಿನ ನಾಲ್ಕು ಬಲಿ
ಹುಬ್ಬಳ್ಳಿ- ಧಾರವಾಡ ದ್ವಿಪಥ ಬೈಪಾಸ್ನಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಗುರುವಾರ ಒಂದೇ ದಿನ ಮತ್ತೆ ಈ ಬೈಪಾಸ್ ನಾಲ್ವರನ್ನು ಬಲಿ ಪಡೆದಿದೆ. ಇತ್ತೀಚೆಗೆ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುಗಿರ್ ಅವರ ಪುತ್ರ ನಿಂತಿದ್ದ ಲಾರಿಗೆ ಡಿಕ್ಕಿ ಹೊಡದ ಅಪಘಾತದಲ್ಲಿ ಮೃತಪಟ್ಟಿದ್ದ. ಇದೇ ರೀತಿ ಗುರುವಾರ ರಾತ್ರಿ ತಾರಿಹಾಳ ಬೈಪಾಸ್ ಬಳಿ ರಸ್ತೆಬದಿ ನಿಂತಿದ್ದ ಲಾರಿಗೆ ಎರಡು ಬೈಕ್ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ಬೆಳಗ್ಗೆ ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಒಬ್ಬ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಹೀಗಿದ್ದರೂ ರಸ್ತೆಬದಿ ಲಾರಿಗಳು ನಿಲ್ಲುತ್ತಲೇ ಇವೆ. ರಸ್ತೆ ವಿಸ್ತರಣೆ ಕಾರ್ಯ ತ್ವರಿತವಾಗಿ ಆಗುತ್ತಿಲ್ಲ.