More

    ನಿಂತಿದ್ದ ಲಾರಿಗೆ ಡಿಕ್ಕಿ, ಮೂವರ ದುರ್ಮರಣ

    ಹುಬ್ಬಳ್ಳಿ: ರಸ್ತೆಬದಿ ನಿಂತಿದ್ದ ಲಾರಿಗೆ ಎರಡು ಬೈಕ್​ಗಳು ಏಕಕಾಲಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಮೇಲಿದ್ದ ಮೂವರು ಮೃತಪಟ್ಟು, ಮತ್ತೋರ್ವ ಗಾಯಗೊಂಡ ಭೀಕರ ಅಪಘಾತ ಪುಣೆ- ಬೆಂಗಳೂರು ಬೈಪಾಸ್​ ತಾರಿಹಾಳ ಬಳಿಯ ಮೆಹಬೂಬ ಡಾಬಾ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ.
    ಸೆಟ್ಲಮೆಂಟ್​ ನಿವಾಸಿಗಳಾದ ಸುನೀಲ ಭಜಂತ್ರಿ (25), ಮಂಜುನಾಥ ಕ್ಯಾರಕಟ್ಟಿ (35) ಹಾಗೂ ವಿನೋದ ಕ್ಯಾರಕಟ್ಟಿ (30) ಮೃತಪಟ್ಟಿದ್ದಾರೆ. ಪರಶುರಾಮ ನಿಟ್ಟೂರ ಗಾಯಗೊಂಡಿದ್ದಾರೆ.
    ಗಾಮನಗಟ್ಟಿಯಲ್ಲಿ ಗೌಂಡಿ ಕೆಲಸ ಮುಗಿಸಿಕೊಂಡು ನಾಲ್ವರೂ ಎರಡು ಬೈಕ್​ನಲ್ಲಿ ಸೆಟ್ಲಮೆಂಟ್​ ಕಡೆಗೆ ಬರುತ್ತಿದ್ದರು. ಈ ವೇಳೆ ಚಾಲಕ ಇಸ್ಮಾಯಿಲ್​ ಎಂಬಾತ ರಸ್ತೆಬದಿ ಲಾರಿ ನಿಲ್ಲಿಸಿದ್ದ. ಇದನ್ನು ಗಮನಿಸದೇ ಬೈಕ್​ ಚಾಲಕರು ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುನೀಲ ಮತ್ತು ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿಮ್ಸ್​ಗೆ ದಾಖಲಾಗಿದ್ದ ವಿನೋದ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಗಾಯಾಳು ಪರಶುರಾಮಗೆ ಚಿಕಿತ್ಸೆ ಮುಂದುವರಿಸಲಾಗಿದೆ.
    ವಿಷಯ ತಿಳಿಯುತ್ತಿದ್ದಂತೆ ದಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು. ಜಖಂಗೊಂಡಿದ್ದ ಎರಡು ಬೈಕ್​, ಲಾರಿ ವಶಕ್ಕೆ ಪಡೆದಿದ್ದಾರೆ.
    ಒಂದೇ ದಿನ ನಾಲ್ಕು ಬಲಿ
    ಹುಬ್ಬಳ್ಳಿ- ಧಾರವಾಡ ದ್ವಿಪಥ ಬೈಪಾಸ್​ನಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಗುರುವಾರ ಒಂದೇ ದಿನ ಮತ್ತೆ ಈ ಬೈಪಾಸ್​ ನಾಲ್ವರನ್ನು ಬಲಿ ಪಡೆದಿದೆ. ಇತ್ತೀಚೆಗೆ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುಗಿರ್ ಅವರ ಪುತ್ರ ನಿಂತಿದ್ದ ಲಾರಿಗೆ ಡಿಕ್ಕಿ ಹೊಡದ ಅಪಘಾತದಲ್ಲಿ ಮೃತಪಟ್ಟಿದ್ದ. ಇದೇ ರೀತಿ ಗುರುವಾರ ರಾತ್ರಿ ತಾರಿಹಾಳ ಬೈಪಾಸ್​ ಬಳಿ ರಸ್ತೆಬದಿ ನಿಂತಿದ್ದ ಲಾರಿಗೆ ಎರಡು ಬೈಕ್​ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ಬೆಳಗ್ಗೆ ಖಾಸಗಿ ಬಸ್​ ಹಾಗೂ ಲಾರಿ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಒಬ್ಬ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಹೀಗಿದ್ದರೂ ರಸ್ತೆಬದಿ ಲಾರಿಗಳು ನಿಲ್ಲುತ್ತಲೇ ಇವೆ. ರಸ್ತೆ ವಿಸ್ತರಣೆ ಕಾರ್ಯ ತ್ವರಿತವಾಗಿ ಆಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts