ಕಲಘಟಗಿ: ತಾಲೂಕಿನ ಗಳಗಿ-ಹುಲಕೊಪ್ಪ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಯಶಸ್ವಿಯಾಗಿದ್ದಾರೆ. ಗ್ರಾಮದ ಹೊರವಲಯದ ಹೊಸ ಕೆರೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿಂದ್ದ ಬೃಹತ್ ಮೊಸಳೆಯೊಂದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿತ್ತು. ಆಹಾರ ಹುಡುಕಿಕೊಂಡು ಬಂದಿದ್ದ ಮೊಸಳೆ ಪ್ರತಿ ದಿನ ರಾತ್ರಿ ಕೆರೆಯಿಂದ ಹೊರಗೆ ಬರುತ್ತಿತ್ತು. ಇದರಿಂದ ರೈತರು ಹೊಲಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದರು. ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮೊಸಳೆ ಸೆರೆ ಹಿಡಿಯಲು ಕೆರೆ ಸುತ್ತ ಬಲೆ ಹಾಕಿ ಕಾರ್ಯಾಚರಣೆ ನಡೆಸಲಾಗಿತ್ತು. ಗುರುವಾರ ಮೊಸಳೆ ಕೆರೆಯಿಂದ ಹೊರಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಸೆರೆ ಹಿಡಿದರು.