ಹುಬ್ಬಳ್ಳಿ: ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಅಂತ್ಯ ಸಿಗುವ ಲಕ್ಷಣ ಕಾಣುತ್ತಿಲ್ಲ. ಕಿಡಿಗೇಡಿಗಳಿಂದ ಗಲಭೆ ದಿನ ನಡೆದ ಅಪರಾಧ ಕೃತ್ಯಗಳು ದಿನಕ್ಕೊಂದರಂತೆ ಬೆಳಕಿಗೆ ಬರುತ್ತಲೇ ಇವೆ.
ಗಲಭೆ ನಡೆದ ರಾತ್ರಿ ಕಿಡಿಗೇಡಿಗಳು ಇಬ್ಬರು ಪೊಲೀಸರ ಹತ್ಯೆಗೆ ಸಂಚು ರೂಪಿಸಿರುವುದು ಬಯಲಾಗಿದ್ದು, ಕೂದಲೆಳೆಯ ಅಂತರದಲ್ಲಿ ಬಚಾವ್ ಆದ ಇಬ್ಬರು ಕಾನ್ಸ್ಟೇಬಲ್ ಗಳು ಪರಾರಿಯಾಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಕಬಾಸ್ ಪೇಟೆ ಠಾಣೆಯ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಎಂಬುವವರ ಮೇಲೆ ಹತ್ಯೆಗೆ ಯತ್ನಿಸಿದ್ದಾರೆ. ಈ ಇಬ್ಬರನ್ನು ಸುತ್ತುವರೆದು ಸೈಜಗಲ್ಲು ಎತ್ತಿಹಾಕಿ ಹತ್ಯೆ ಮಾಡಲು ಯತ್ನಿಸಿದ್ದಾರೆ.
10 ರಿಂದ 15 ಜನ ಗಲಭೆಕೋರರು ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಾಣಭಯದಿಂದ ಇಬ್ಬರು ಪೇದೆ ಅಲ್ಲೇ ಬೈಕ್ ಬಿಟ್ಟು ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಇಬ್ಬರು ಪೇದೆಗಳು ದೂರು ದಾಖಲಿಸಿದ್ದಾರೆ.