ನವದೆಹಲಿ: ವಸತಿ ಇಲಾಖೆಗೆ ಸಂಬಂಧಿಸಿದ ಕೆಲಸದ ನಿಮಿತ್ತ ದೆಹಲಿಗೆ ಬಂದಿರುವ ವಸತಿ ಸಚಿವ ವಿ.ಸೋಮಣ್ಣ, ಸಂಸತ್ ಭವನದಲ್ಲಿ ಪ್ರಲ್ಹಾದ್ ಜೋಶಿ ಅವರೊಂದಿಗೆ ಕರ್ನಾಟಕ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ, ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಕೂಡ ಸಭೆಯಲ್ಲಿ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಬಿಜೆಪಿ ಬಿಡುತ್ತೇನೆ ಎಂದು ಯಾರು ಹೇಳಿದ್ದು? ಊಹಾಪೋಹ ಹಬ್ಬಿದೆ ಅಷ್ಟೆ. ನಾನು ಏನು ಹೇಳುಬೇಕು ಎಂಬುದನ್ನು ಈಗಾಗಲೇ ಹೇಳಿಯಾಗಿದೆ. ಇಲಾಖೆಯ ಕೆಲಸ ಹಾಗೂ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಲು ದೆಹಲಿ ಬಂದಿದ್ದೇನೆ ಎಂದರು.
ಇದನ್ನೂ ಓದಿ: ಕೊಳೆತ ಸ್ಥಿತಿಯಲ್ಲಿ ಪ್ಲ್ಯಾಸ್ಟಿಕ್ ಬ್ಯಾಗ್ನಲ್ಲಿತ್ತು ಮಹಿಳೆಯ ದೇಹ; ಪೊಲೀಸರಿಂದ ಮಗಳ ವಿಚಾರಣೆ
ಇದೇ ವೇಳೆ ಮಾತನಾಡುತ್ತಾ, ವಿಜಯೇಂದ್ರ ಹಾಗೂ ನನ್ನ ಮಗನ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಗೊಂದಲ ಇರುವ ಬಗ್ಗೆ ಅವರಲ್ಲೇ ಕೇಳಿ. ನನಗೂ, ವಿಜಯೇಂದ್ರ ಅವರಿಗೂ ಎಷ್ಟು ವಯಸ್ಸು? ವಿಜಯೇಂದ್ರ ನಮ್ಮ ಮಾಜಿ ಸಿಎಂ ಅವರ ಮಗ. ಅವರಿಗೆ ನನ್ನ ಬಗ್ಗೆ ಏನು ಅಭಿಪ್ರಾಯ ಇದೆಯೋ ಗೊತ್ತಿಲ್ಲ ಎಂದು ಹೇಳಿದರು.
ನಾನು 45 ವರ್ಷದಿಂದ ಜನಸೇವೆ ಮಾಡುತ್ತಾ ಬಂದಿದ್ದೇನೆ. ನನಗೆ ಯಾವುದೇ ವ್ಯಾಮೋಹ ಇಲ್ಲ. ಅಭಿವೃದ್ಧಿ ಕಡೆಗೆ ಗಮನ ಕೊಡಿ. ಬದಲಾಗಿ ಸೋಮಣ್ಣ, ಯಡಿಯೂರಪ್ಪ ಎಂದು ಸಮಯ ಹಾಳು ಮಾಡಬೇಡಿ. ನನ್ನಿಂದ ಬಿಜೆಪಿಗೆ ಯಾವುದೇ ಕಾರಣಕ್ಕೂ ಅಪಚಾರ ಆಗುವುದಿಲ್ಲ. ಸಿದ್ದಗಂಗಾ ಮಠಕ್ಕೂ ನಂಗೂ ಯಾವುದೇ ಮನಸ್ತಾಪ ಇಲ್ಲ. ಅಲ್ಲಿನ ಕಾರ್ಯಕ್ರಮಕ್ಕೆ ಹೋಗದಿರುವುದು ನನ್ನ ವೈಯಕ್ತಿಕ ತೀರ್ಮಾನ ಎಂದು ಹೇಳುತ್ತಾ, ಸಚಿವ ಸೋಮಣ್ಣ ಬೇಸರ ಹೊರಹಾಕಿದರು.