ಚಿಕ್ಕೋಡಿ: ಅಂಕಲಿಯಂತಹ ಒಂದು ಹಳ್ಳಿಯಲ್ಲಿ ಡಾ. ಎನ್.ಎ.ಮಗದುಮ್ಮ ಮತ್ತು ತಂಡದವರು ಆರಂಭಿಸಿರುವ ಅತ್ಯಾಧುನಿಕ ಸೌಕರ್ಯಗಳುಳ್ಳ ಕೋವಿಡ್ ಆಸ್ಪತ್ರೆ ಜನರಿಗೆ ವರದಾನವಾಗಲಿ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ಹೇಳಿದ್ದಾರೆ. ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಮಹಾ ವಿದ್ಯಾಲಯದ ಆವರಣದಲ್ಲಿ ಸೋಮವಾರ ಆರಂಭಿಸಿದ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ತಾಲೂಕು ಮತ್ತು ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬೆಡ್ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಹೆಚ್ಚಿನ ವೈದ್ಯಕೀಯ ಸೇವೆ ನೀಡಲು ಮುಂದಾಗಿರುವುದು ಅಭಿನಂದನಾರ್ಹ ಎಂದರು. ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ ಮಾತನಾಡಿ, ನಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಬೇರೆ ಸಾಮಾನ್ಯ ರೋಗಿಗಳೀಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿತ್ತು.
ಆ ಸಮಸ್ಯೆ ಮನಗಂಡು ಈ ಭಾಗದ ಎಲ್ಲ ವೈದ್ಯರು ಸೇರಿಕೊಂಡು ಒಂದು ಕೋವಿಡ್ ಆಸ್ಪತ್ರೆ ಆರಂಭಿಸುವ ನಿರ್ಧಾರ ತೆಗೆದುಕೊಂಡು ಅಂಕಲಿ ಗ್ರಾಮದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆ ಆರಂಭಿಸಲಾಗಿದೆ. ಈ ಭಾಗದ ಜನರು ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ಬಿ.ಘಾಟಗೆ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಡಾ.ವಿ.ವಿ.ಶಿಂಧೆ, ಡಾ.ಸಂಜಯ ಬಾನೆ, ಡಾ.ಶಿವಾನಂದ ಪಾಟೀಲ, ಡಾ.ಮಹೇಶ ಕುಂಬಾರ, ಡಾ.ಅರುಣ ಕಿಲ್ಲೇಕರ, ಧೂಳಗೌಡ ಪಾಟೀಲ, ಬಿ.ಎ.ಪೂಜೇರಿ, ತುಕಾರಾಮ ಪಾಟೀಲ, ಸುರೇಶ ಪಾಟೀಲ, ಸುರೇಶ ಚೌಗುಲೆ, ಎಲ್.ಎನ್.ಮಗದುಮ್ಮ ಉಪಸ್ಥಿತರಿದ್ದರು. ಬಸವಣ್ಣಿ ಸಂಗಪ್ಪಗೋಳ ನಿರೂಪಿಸಿ.ವಂದಿಸಿದರು.