ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಹೊರ ಬಿಟ್ಟಿದ್ದು, ಹಂಪಿಯಲ್ಲಿರುವ ಐತಿಹಾಸಿಕ ಸ್ಮಾರಕಗಳು ಒಂದೊಂದಾಗಿ ಜಲಾವೃತಗೊಂಡಿವೆ.
ಶುಕ್ರವಾರ ಬೆಳಗ್ಗೆ 8ಗಂಟೆವರೆಗೆ ಜಲಾಶಯಕ್ಕೆ 1,10,173 ಕ್ಯೂಸೆಕ್ ಒಳಹರಿವಿದ್ದು, 1,52,389 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಅಪಾರ ಪ್ರಮಾಣದಲ್ಲಿ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಹಂಪಿಯಲ್ಲಿರುವ ಸೀತೆ ಸೆರಗು ಬಂಡೆ ಬಳಿ ನೀರು ಭೋರ್ಗರೆಯುತ್ತಿದೆ. ಶ್ರೀಕೋದಂಡರಾಮ ದೇವಸ್ಥಾನದ ಯಂತ್ರೋದ್ಧಾರಕ ಚಕ್ರತೀರ್ಥರ ಸಾಲು ಮಂಟಪಗಳಿಗೆ ಜಲ ದಿಗ್ಭಂಧನ ಉಂಟಾಗಿದೆ. ಎರಡು ದಿನಗಳಿಂದ ಒಂದು ಲಕ್ಷ ಕ್ಯೂಸೆಕ್ಗಿಂತ ಹೆಚ್ಚಿನ ನೀರು ಹರಿಸಲಾಗುತ್ತಿದ್ದು, ಈಗಾಗಲೇ ಪುರಂದರ ಮಂಟಪ, ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ನದಿ ಪಾತ್ರದಲ್ಲಿರುವ ಬಾಳೆ ತೋಟಗಳು ಹಾನಿಗೀಡಾಗಿವೆ.