ರೆಟ್ರೋ ರಿಫ್ಲೆಕ್ಟರ್ ಸ್ಟಿಕ್ಕರ್ಗೆ ಭಾರಿ ವಿರೋಧ;
ಹೊಸಪೇಟೆ: ಖಾಸಗಿ ಕಂಪನಿಗಳ ಸರ್ಟಿಫಿಕೇಟ್ ಆಧಾರಿತ ರೆಟ್ರೋ ರಿಫ್ಲೆಕ್ಟರ್ ಸ್ಟಿಕ್ಕರ್ ಹಾಗೂ ರೇರ್ ಮಾರ್ಕಿಂಗ್ ಪ್ಲೇಟ್ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಾರಿಗೆ ವಾಹನ ಚಾಲಕರ ಹಾಗೂ ಮಾಲೀಕರ ಸಂಘಗಳ ಒಕ್ಕೂಟ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣಗೆ ವನವಿ ಸಲ್ಲಿಸಿತು. ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದರಿಂದ ಸಾರಿಗೆ ಕ್ಷೇತ್ರ ಚೇತರಿಸಿಕೊಂಡಿಲ್ಲ. ಖಾಸಗಿ ಟ್ರಾನ್ಸ್ಪೋರ್ಟ್, ಗೂಡ್ಸ್ ವಾಹನಗಳ ಮಾಲೀಕರು, ಚಾಲಕರು ಮತ್ತು ನಿರ್ವಾಹಕರು ಇಂದಿಗೂ ಸಾಲದ ಸುಳಿಯಲ್ಲೇ ದಿನ ಕಳೆಯುತ್ತಿದ್ದಾರೆ. ವಾಹನಗಳ ಬಿಡಿಭಾಗಗಳು, ಥರ್ಡ್ ಪಾರ್ಟಿ ಇನ್ಶುರೆನ್ಸ್ ಹಣ, ತೈಲೋತ್ಪನ್ನಗಳ ಬೆಲೆಗಳು ಹೆಚ್ಚಳ ವಾಗಿವೆ. ದುಬಾರಿ ತೆರಿಗೆ, ಎಫ್ಸಿ ನವೀಕರಣ ಶುಲ್ಕ ಏರಿಕೆ ಹಾಗೂ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಖಾಸಗಿ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಕಂಪನಿಗಳ ಸರ್ಟಿಫಿಕೇಟ್ ಆಧಾರಿತ ದುಬಾರಿ ಬೆಲೆಯ ಸ್ಟಿಕ್ಕರ್ ಹಚ್ಚಬೇಕು ಎಂಬ ಆದೇಶ ಸಂಕಷ್ಟ ತಂದೊಡ್ಡಿದೆ. ಸಾರಿಗೆ ಇಲಾಖೆ ಆದೇಶದನ್ವಯ ಈಗಾಗಲೇ ಸಾರಿಗೆ ವಾಹನಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಟಿಕ್ಕರ್ಗಳನ್ನು ಅಂಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳ ಆಧಾರಿತ ರೆಟ್ರೋ ರಿಫ್ಲೆ ಕ್ಟರ್ ಸ್ಟಿಕ್ಕರ್ ಹಾಗೂ ರೇರ್ ಮಾರ್ಕಿಂಗ್ ಪ್ಲೇಟ್ ಆದೇಶವನ್ನು ಹಿಂಪಡೆಯಬೇಕು ನಿಯೋಜನೆ ಮೇರೆಗೆ ಹತ್ತಾರು ವರ್ಷಗಳಿಂದ ಇಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು ಕಾನೂನಿನ ಹೆಸರಿನಲ್ಲಿ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಈ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು. ಸ್ಪೀಡ್ ಗವರ್ನರ್ ಆದೇಶವನ್ನು ಹಿಂಪಡೆಯಬೇಕು. ರಾಜ್ಯದ್ಯಂತ ಆರ್ಟಿಒ ಮತ್ತು ಪೊಲೀಸರ ಕಿರುಕುಳವನ್ನು ತಡೆಯಬೇಕು. ವಾಯುಮಾಲಿನ್ಯ ತಪಾಸಣಾ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು. ಸಾರಿಗೆ ವಾಹನಗಳಿಗೆ ಹಾಕುವಂತಹ ದುಬಾರಿ ದಂಡದ ಆದೇಶ ವಾಪಸಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಸಚಿವ ಆನಂದ ಸಿಂಗ್, ತಮಿಳುನಾಡಿನಲ್ಲಿ ಇನ್ನೂ ಈ ಆದೇಶ ಜಾರಿಗೊಳಿಸಿಲ್ಲ. ಈ ಬಗ್ಗೆ ಸಾರಿಗೆ ಸಚಿವರು, ಇಲಾಖೆ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಂಡು, ವಾಹನ ಸವಾರರಿಗೆ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಟೋ ಟ್ಯಾಕ್ಸಿ, ಟಾಟಾ ಏಸ್, ಮಿನಿ ಲಾರಿ ಸಂಘಟನೆ ಅಧ್ಯಕ್ಷ ಕೆ.ಎಂ.ಸಂತೋಷ ಕುಮಾರ, ಆಟೋ ಸಂಘಟನೆ ಕಾರ್ಯದರ್ಶಿ ವೈ.ರಾಮಚಂದ್ರ ಬಾಬು, ಲಘು ವಾಹನ ಚಾಲಕರ ಸಂಘದ ಕಾರ್ಯದರ್ಶಿ ಕೃಷ್ಣ, ಪ್ರಸಾದ, ಅಜರತ್, ಕೊಟ್ರೇಶ, ಗುಜ್ಜಲ ಗಣೇಶ, ಯಮನಪ್ಪ, ರವಿ, ಹುಸೇನ್ ಸಾಬ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.