ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಬುಧವಾರ ದಿನಿವಿಡೀ ಸುರಿದ ಜಿಟಿ ಜಿಟಿ ಮಳೆಗೆ ಜನರು ಹೈರಾಣಾದರು.
ಇದನ್ನೂ ಓದಿ: ಮುಂದುವರಿದ ಥಂಡಿ ಹವಾ,ಜಿಟಿ ಜಿಟಿ ಮಳೆ
ಜನರು ಮನೆಯಿಂದ ಹೊರ ಬರಲು ಹಿಂದೇಟು
ಮಂಗಳವಾರ ಸಂಜೆಯಿಂದಲೇ ಶುರುವಾಗಿರುವ ಮಳೆ, ಬುಧವಾರ ರಾತ್ರಿವರೆಗೂ ಮುಂದುವರಿಯಿತು. ನಿರಂತರವಾಗಿ ಸುರಿಯುವ ತುಂತುರು ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಯಿತು. ಬೆಳಗ್ಗೆ ಶಾಲಾ, ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಹಾಗೂ ಸಂಜೆ ಮನೆಗೆ ಹಿಂದುರುಗುವಾಗ ಮಳೆಯಿಂದ ರಕ್ಷಿಸಿಕೊಳ್ಳಲು ರೇನ್ ಕೋಟ್, ಛತ್ರಿಗಳ ಮೊರೆ ಹೋದರು. ಸತತ ಮಳೆಯಿಂದಾಗಿ ಜನರು ಹೊರಗೆ ಕಾಲಿಡದಂತಾಗಿದ್ದರಿಂದ ನಗರದ ಬಹುತೇಕ ರಸ್ತೆಗಳು ಖಾಲಿಯಾಗಿದ್ದವು.
24 ಗಂಟೆಗಳ ಕಾಲ ಸುರಿದ ಮಳೆ ರೈತರಲ್ಲಿ ಹರ್ಷ ಮೂಡಿಸಿದೆ. ಈಗಾಗಲೇ ಮುಂಗಾರು ವಿಳಂಬದಿಂದ ಕಂಗೆಟ್ಟಿದ್ದ ಕೃಷಿಕರಿಗೆ ಈ ಮಳೆ ಹೊಸ ಭರವಸೆ ಮೂಡಿಸಿದೆ. ಜಮೀನುಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ರೈತರು ತಲೆ ಮೇಲೆ ಟವೆಲ್ ಹಾಕಿಕೊಂಡು ಮಳೆಯಿಂದ ರಕ್ಷಣೆ ಪಡೆದರು.
ಎಲ್ಲೆಲ್ಲಿ ಎಷ್ಟು ಮಳೆ
ಬುಧವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಜಿಲ್ಲೆಯಲ್ಲಿ ಅಂದಾಜು 40 ಮಿ.ಮೀ. ಮಳೆಯಾಗಿದ್ದು, ಈ ಪೈಕಿ ಹಡಗಲಿಯಲ್ಲಿ 10.2 ಮಿ.ಮೀ. ಮಳೆ ದಾಖಲಾಗಿದೆ. ಎಚ್.ಬಿ.ಹಳ್ಳಿಯಲ್ಲಿ 5.4, ಹೊಸಪೇಟೆಯಲ್ಲಿ 5.2, ಕೂಡ್ಲಿಗಿಯಲ್ಲಿ 2.8, ಹರಪನಹಳ್ಳಿಯಲ್ಲಿ 6.4 ಹಾಗೂ ಕೂಡ್ಲಿಗಿಯಲ್ಲಿ 7.8 ಮಿ.ಮೀ. ಮಳೆ ಸುರಿದಿದೆ.