ಹೊಸಪೇಟೆ: ತಾಲೂಕಿನ ಇಂಗಳಗಿ ಗ್ರಾಮದ ಹೊಲವೊಂದರಲ್ಲಿ ಭಾನುವಾರ ರಾತ್ರಿ ಕುರಿಗಾಹಿ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಕ್ಯಾದಿಗಿಹಾಳ್ ಪಂಪಾಪತಿ (50) ಗಾಯಾಳು.
ತಾಲೂಕಿನ ಅಟಲ್ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಹಿಂಭಾಗದ ಹೊಲದಲ್ಲಿ ಭಾನುವಾರ ರಾತ್ರಿ ಕುರಿ ಹಟ್ಟಿ ಹಾಕಿ ಮಲಗಿದ್ದಾಗ ಚಿರತೆ ದಾಳಿ ಮಾಡಿ ತುಟಿ ಕಚ್ಚಿದ್ದು, ತೀವ್ರ ರಕ್ತಸ್ರಾವವಾಗಿದೆ. ಅಲ್ಲಿಯೇ ಮಲಗಿದ್ದ ಪಂಪಾಪತಿ ಪುತ್ರ ಸಾಕುನಾಯಿಗಳ ನೆರವಿನೊಂದಿಗೆ ಚಿರತೆ ಓಡಿಸಿ, ತಂದೆಯನ್ನು ರಕ್ಷಿಸಿದ್ದಾನೆ. ಬಳಿಕ ಆಂಬುಲೆನ್ಸ್ ಮೂಲಕ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಾಗಲೆಲ್ಲ ಸೆರೆ ಹಿಡಿಯುವಂತೆ ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಕುರಿ, ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆಗಳು ಇದೀಗ ಮನುಷ್ಯನ ರಕ್ತ ಹೀರಲು ಮುಂದಾಗಿವೆ. ಕೃಷಿ ಕೆಲಸಕ್ಕೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರಿಗೆ ಜೀವಭಯ ಕಾಡುತ್ತಿದೆ. ಇನ್ನಾದರೂ ಅರಣ್ಯ ಸಚಿವರು ಅರಣ್ಯದಂಚಿನ ಗ್ರಾಮಗಳ ಜನರ ಜೀವರಕ್ಷಣೆಗೆ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.