ಹೊಸಪೇಟೆ: ರೈತರಿಗೆ ಸಂಕಷ್ಟ ತಂದಿರುವ ಮೂರು ಕೃಷಿ ಕಾಯ್ದೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಇದನ್ನೂ ಓದಿರಿ: ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಕೋಡಿಹಳ್ಳಿ ಒತ್ತಾಯ
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಗ್ರೀವಾಜ್ಞೆ ಮೂಲಕ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಬಿ.ಎಸ್.ಯಡಿಯೂರಪ್ಪ ಅವರು ಪಕ್ಷ ಮತ್ತು ಸಂಘ ಪರಿವಾರದ ನಿಷ್ಠೆ ಮೆರೆದರು.
ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ತೀವ್ರ ವಿರೋಧಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮೂರು ಕಾಯ್ದೆಗಳನ್ನು ಹಿಂಪಡೆಯುವ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು. ಅದನ್ನು ಈಗ ಅನುಷ್ಠಾನಕ್ಕೆ ತರಲಿ ಎಂದು ಒತ್ತಾಯಿಸಿದರು.
ಮೂರು ಕೃಷಿ ಕಾಯ್ದೆಗಳು ಬಂಡವಾಳಶಾಹಿಗಳ ಪರವಾಗಿವೆ. ಅವುಗಳಿಂದ ರೈತರ ಬದುಕು ಬೀದಿಗೆ ಬರುತ್ತದೆ. ಆದರೆ, ಕೃಷಿ ಕಾಯ್ದೆ ತಿದ್ದುಪಡಿಗೆ ಸರ್ಕಾರ ಸದನದಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಬಿಜೆಪಿ ಶಾಸಕರು ಆಕ್ಷೇಪಿಸಿದರು.
ಆಗ ತಮ್ಮ ನಿಲುವು ಪ್ರದರ್ಶಿಸುವ ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ರೈತರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಅವರಲ್ಲಿರುವ ಗೊಂದಲವನ್ನು ಸಾರುತ್ತದೆ ಎಂದು ಕುಟುಕಿದರು.
ಜೆ.ಕಾರ್ತಿಕ್ನಿಂದ ಸಂಘಟನೆಯಾಗಿಲ್ಲ
ಸಂಘಟನೆಯಲ್ಲಿ ಯುವ ಜನರಿಗೆ ಆದ್ಯತೆ ನೀಡಬೇಕು. ರೈತ ಹೋರಾಟ ಸಂಸ್ಕೃತಿಯನ್ನು ಮುನ್ನಡೆಸುವ ಉದ್ದೇಶದಿಂದ ಹೊಸಪೇಟೆ ಕಾರ್ತಿಕ್ ಜೆ.ಗೆ ನಿರೀಕ್ಷೆಗೂ ಮೀರಿ ಸಂಘಟನೆಯಲ್ಲಿ ಸ್ಥಾನಮಾನ ನೀಡಲಾಗಿತ್ತು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಕಾರ್ತಿಕ್ ಜಿಲ್ಲಾಧ್ಯಕ್ಷರಾದಾಗ ಜಿಲ್ಲೆಯ ಒಂದೇ ಒಂದು ತಾಲೂಕು ಘಟಕ ರಚಿಸಲಿಲ್ಲ. ರಾಜ್ಯ ಪ್ರಧಾನ ಕಾರ್ಯದರ್ಶಿಯಾದಗ ಯಾವುದೇ ಭಾಗದಲ್ಲಿ ಪ್ರವಾಸ ಮಾಡಲಿಲ್ಲ. ನನಗೆ ಸರ್ವಾಧಿಕಾರಿ ಎಂದು ಟೀಕಿಸುವ ಕಾರ್ತಿಕ್ ಜೆ. ಸಂಘಟನೆಯಲ್ಲಿ ತೊಡಗಿಸಿಕೊಂಡ ರೀತಿ ಏನು ಎಂದು ತಿರುಗೇಟು ನೀಡಿದರು.