ಹೊಸಪೇಟೆ: ಭಿಕ್ಷಾಟನೆ, ದುರುದ್ದೇಶಕ್ಕಾಗಿ ನಡೆಯುತ್ತಿರುವ ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯ ಎಂದು ಜಿಪಂ ಸಿಇಒ ಸದಾಶಿವ ಪ್ರಭು ಬಿ. ಹೇಳಿದರು.
ಇದನ್ನೂ ಓದಿರಿ:ಅಧಿಕಾರಿಗಳು ಸರ್ಕಾರದ ಕಣ್ಣು-ಕಿವಿಯಾಗಲಿ -ಜಿಲ್ಲಾಧಿಕಾರಿ ಡಾ. ವೆಂಕಟೇಶ್ -ಮಾನವ ಕಳ್ಳ ಸಾಗಣೆ ಜಾಗೃತಿ ಕಾರ್ಯಾಗಾರ
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಣೆ ತಡೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಕಳ್ಳಸಾಣೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಹೆಚ್ಚು ತೊಂದರೆಗೆ ಒಳಪಡುತ್ತಾರೆ. ಭಿಕ್ಷಾಟನೆ ಮತ್ತಿತರ ದುಷ್ಕೃತ್ಯಗಳಿಗೆ ಅವರನ್ನು ದೂಡಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ ಎಂದರು.
ನ್ಯಾಯವಾದಿ ಶ್ವೇತಾಂಬರಿ ಅವರು ಮಾನವ ಕಳ್ಳಸಾಗಣೆಗೆ ವಿಧಿಸುವ ಶಿಕ್ಷೆ, ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ ಪ್ರಸ್ತಾವಿಕ ನುಡಗಿಳನ್ನಾಡಿದರು. ಇದಕ್ಕೂ ಮುನ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ನ್ಯಾ.ಕಿಶನ್ ಬಿ. ಮಾಡಲಗಿ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ಮಾನವ ಕಳ್ಳ ಸಾಗಣೆ ತಡೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿ ಎಂಸಿಎಚ್ ಆಸ್ಪತ್ರೆಗೆ ತಲುಪಿತು.