ಹೊಸಪೇಟೆ: ಸಮಸ್ಯೆಗಳು ಎದುರಾದಾಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಬದಲು ಪರಿಹಾರ ಕಂಡುಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ನಟ, ನಿರ್ದೇಶಕ ರಮೇಶ್ ಅರವಿಂದ ಸಲಹೆ ನೀಡಿದರು.
ನಗರದ ಶ್ರೀ ಗುರು ಪದವಿಪೂರ್ವ ಮತ್ತು ಪದವಿ ಕಾಲೇಜು ಮಂಗಳವಾರ ಹಮ್ಮಿಕೊಂಡಿದ್ದ ಪ್ರೇರಣಾದಾಯಕ ಸ್ಪೀಚ್ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿರುತ್ಸಾಹದಿಂದ ಮನಸ್ಥಿತಿ ಹಾಳಾಗುತ್ತದೆ. ಮುನ್ನುಗ್ಗಿದರೆ ಸಾಧನೆಯ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದರು.
ನನಗೆ ಒಳ್ಳೆಯ ಗೆಳೆಯ, ಮಾರ್ಗದರ್ಶಕರು ಇಲ್ಲವೆಂದು ಕೊರಗಬಾರದು. ಅವರಿದ್ದರೆ ಸಾಧನೆಯ ಹಾದಿ ಸುಲಭ. ಇಲ್ಲದಿದ್ದರೆ ಆತ್ಮ ವಿಶ್ವಾಸ ವೃದ್ಧಿಸಿಕೊಂಡು ಮುನ್ನಡೆಯಬೇಕು. ಸಾಧನೆಗೆ ಮಿತಿ ಇಲ್ಲ. ದೇವರು ಎಲ್ಲರಿಗೂ ಒಂದೇ ರೀತಿಯ ಶಕ್ತಿ ಕೊಟ್ಟಿದ್ದಾನೆ. ಅದು ನಮ್ಮ ಯೋಚನೆ, ಯೋಜನೆಗಳಿಂದ ಬೆಳವಣಿಗೆ ಹೊಂದುತ್ತ ಹೋಗುತ್ತದೆ. ಯಾರ ಜತೆಗೆ ಸ್ನೇಹ ಬೆಳೆಸುತ್ತೇವೆ ಎಂಬುದು ಮುಖ್ಯ. ಒಳ್ಳೆ ಗೆಳೆತನ, ಒಳ್ಳೆಯ ಗುರು, ಮಾರ್ಗದರ್ಶಕರು ಇದ್ದರೆ ಜೀವನದ ದಿಕ್ಕೇ ಬದಲಾಗುತ್ತದೆ. ನಿಮ್ಮ ಯೋಚನೆಗೆ ಸರಿಹೊಂದದವರ ಗೆಳೆತನದಿಂದ ಆದಷ್ಟು ದೂರವಿರಿ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ : ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು ಪ್ರಶ್ನೆಗಳ ಸುರಿಮಳೆಗೈದರು. ಪರೀಕ್ಷೆ ಸಂದರ್ಭದಲ್ಲಿ ಭಯ ಕಾಡುತ್ತದೆ, ಓದಿದ್ದು ನೆನಪಿನಲ್ಲೇ ಇರುವುದಿಲ್ಲ. ಕೊನೆಯ ಬೆಂಚ್ನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ದೊಡ್ಡಮಟ್ಟದ ಸಾಧನೆ ಮಾಡುತ್ತಾರೆ. ಇದು ಹೇಗೆ ಸಾಧ್ಯ? ಮೋಟಿವೇಷನಲ್ ಸ್ಪೀಚ್ ಕೇಳಿದರೂ ಮತ್ತೆ ಮತ್ತೆ ಭಯವಾಗುತ್ತದೆ ಏಕೆ? ಮೊದಲಾದ ಪ್ರಶ್ನೆಗಳು ಮೂಡಿ ಬಂದವು. ಇವಕ್ಕೆಲ್ಲ ರಮೇಶ್ ಅರವಿಂದ, ವಿದ್ಯಾರ್ಥಿಗಳ ಬಳಿ ತೆರಳಿ ಸೂಕ್ಷ್ಮವಾಗಿ ಉತ್ತರಿಸಿದರು. ವಿಷಯ ನಮಗೆ ತಿಳಿದಿಲ್ಲವೆಂದರೆ ಮಾತ್ರ ಭಯ ಆವರಿಸಿಕೊಳ್ಳುತ್ತದೆ. ತಿಳಿದುಕೊಳ್ಳಲಾಗದ ಕಠಿಣ ವಿಷಯ ಯಾವುದೂ ಇಲ್ಲ. ಮನಸ್ಸಿಟ್ಟು ಓದಬೇಕು. ಕೊನೆಯ ಬೆಂಚ್ ವಿದ್ಯಾರ್ಥಿಗಳ ಮನಸ್ಸಲ್ಲಿ ಸಮಾಜದ ವ್ಯವಸ್ಥೆ ಬಗ್ಗೆ ಪ್ರಶ್ನಿಸುವ ಮನೋಭಾವ ಇರುತ್ತದೆ. ಪ್ರಶ್ನಿಸುವ ಗುಣ ಮುಖ್ಯ ಎಂದರು.