ವಿಜಯನಗರ: ಕಳೆದ ತಿಂಗಳಷ್ಟೇ ಹೊಸಪೇಟೆಯ ರಾಣಿಪೇಟೆಯಲ್ಲಿ ಶಾಲಾ ಮಕ್ಕಳ ಕೈಗೆ ಸಿಕ್ಕಿದ್ದ ಅಪರೂಪದ ಯುರೇಶಿನ್ ಗ್ರಿಫನ್ ಜಾತಿಯ ರಣಹದ್ದು ಮರಳಿ ಗೂಡಿಗೆ ಹಾರಿದೆ.
ಕಳೆದ ಡಿಸೆಂಬರ್ನಲ್ಲಿ ರಾಣಿಪೇಟೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಶಾಲಾ ಹುಡಗರ ಕಣ್ಣಿಗೆ ಯುರೇಷಿಯನ್ ಗ್ರಿಫನ್ ಜಾತಿಯ ರಣಹದ್ದು ಬಿದ್ದಿತ್ತು. ಇದಾದ ಬಳಿ ಪತ್ರಕರ್ತ ಹಾಗೂ ಹವ್ಯಾಸ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅವರು ಮಕ್ಕಳ ಕೈಯಿಂದ ರಣಹದ್ದನ್ನು ರಕ್ಷಿಸಿ, ತಾಲ್ಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕಿಗೆ ಹಸ್ತಾಂತರ ಮಾಡಿದ್ದರು.
ಮೃಗಾಲಯದ ತಜ್ಞ ಪಶುವೈದ್ಯೆ ಡಾ.ವಾಣಿ ಅವರು ಅಸ್ವಸ್ಥ ಸ್ಥಿತಿಯಲ್ಲಿದ್ದ ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಚೇತರಿಸಿಕೊಂಡ ಪಕ್ಷಿಯನ್ನು ತಾಲ್ಲೂಕಿನ ಇಂಗಳಿಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಹಾರಿ ಬಿಟ್ಟು ಪಂಜರದಿಂದ ಮುಕ್ತಗೊಳಿಸಿದರು.
ಗುರುತು ಪತ್ತೆ
ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಅವರು ರಾಷ್ಟೀಯ ರಣಹದ್ದು ತಜ್ಞರನ್ನು ಸಂಪರ್ಕಿಸಿ, ಅಪರೂಪವಾಗಿ ಕಂಡು ಬಂದ ರಣಹದ್ದಿನ ನೈಜಗುರುತನ್ನು ಪತ್ತೆ ಮಾಡಿದರು. ಬೃಹತ್ ಗಾತ್ರದ ಪಕ್ಷಿಯ ಎತ್ತರ, ಗಾತ್ರ, ತೂಕ, ಗರಿಗಳ ಬಣ್ಣ, ಮುಂತಾದ ಗುಣ, ಬಣ್ಣವನ್ನು ಪರೀಕ್ಷಿಸಿ, ಇದೊಂದು ಒಂದು ವರ್ಷ ವಯೋಮಾನದ ಯೂರೋಪಿಯನ್ ಗ್ರಿಫನ್ ಎಂಬ ರಣಹದ್ದು ಎಂಬುದನ್ನು ಖಚಿತ ಪಡಿಸಿದರು.
ಸಾಮಾನ್ಯವಾಗಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕಂಡು ಬರುವ ಈ ರಣಹದ್ದುಗಳು ದಕ್ಷಿಣ ಭಾರತಕ್ಕೆ ವಲಸೆ ಬಂದಾಗ ಕೆಲವೊಮ್ಮೆ ನಿರ್ಜಲೀಕರಣದಿಂದ ಬಸವಳಿದು ನೆಲಕ್ಕೆ ಬೀಳುವುದನ್ನು ಕಾಣುತ್ತವೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿ ರಣಹದ್ದುಗಳು ಬಸವಳಿದು ನೆಲಕ್ಕೆ ಬಿದ್ದಿರುವ ಪ್ರಸಂಗಗಳು ಕಂಡು ಬಂದಿವೆ. ಅವುಗಳನ್ನು ಸಂರಕ್ಷಿಸಿ, ಚಿಕಿತ್ಸೆ ನೀಡಿ ಅವು ಚೇತರಿಸಿಕೊಂಡ ಬಳಿಕ ಮರಳಿ ಹಾರಿಬಿಡಲಾಗುತ್ತದೆ. ಅದೇ ರೀತಿ ಇದೀಗ ಈ ರಣಹದ್ದನ್ನು ಕೂಡ ಸಮೀಪದ ಇಂಗಳಗಿ ಗ್ರಾಮದ ಬಳಿಯ ಎತ್ತರದ ಬೆಟ್ಟದ ತುದಿಯಲ್ಲಿ ಪೆಟ್ಟಿಗೆಯಿಂದ ಹೊರಬಿಟ್ಟು ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸಲು ಅವಕಾಶ ನೀಡಲಾಯಿತು.
ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಟ್ಟದ ಮೇಲೆ ಹಾರಾಡಿದ ರಣಹದ್ದು ಸುಲಲಿತವಾಗಿ ಉತ್ತರ ದಿಕ್ಕಿನ ಕಡೆ ಹಾರಿ ಕಣ್ಮರೆಯಾಯಿತು. ಈ ರಣಹದ್ದಿನ ಕಾಲಿಗೆ ವಿಶೇಷ ಗುರುತಿನ ನೀಲಿ ಬಣ್ಣ ಉಂಗುರವನ್ನು ಹಾಕಲಾಗಿದೆ. ಉಂಗುರದ ಮೇಲೆ ಇಂಗ್ಲಿಷ್ ಅಕ್ಷರದಲ್ಲಿ ಸಿಯು, ಸಿಯು ಎಂದು ಮುದ್ರಿಸಲಾಗಿದೆ. ಇದನ್ನು ಆಧರಿಸಿ ಮುದೊಂದು ದಿನ ರಣಹದ್ದು ಹೊಸಪೇಟೆಯ ಪ್ರದೇಶದಲ್ಲಿ ಕಾಣಿಸಿಕೊಂಡು ರಕ್ಷಿಸಲ್ಪಟ್ಟಿತ್ತು ಎಂಬುದನ್ನು ಸುಲಭವಾಗಿ ಗುರುತಿಸಬಹುದು ಎಂದು ಡಾ. ಸಮ್ಮದ್ ಕೊಟ್ಟೂರು ಮಾಹಿತಿ ನೀಡಿದರು.
ಯುರೇಶಿಯನ್ ಗ್ರಿಫನ್ ರಣಹದ್ದು, ಬೇಟೆಯ ಕುಟುಂಬ ಆಕ್ಸಿಪಿಟ್ರಿಡೆಯಲ್ಲಿನ ದೊಡ್ಡ ಓಲ್ಡ್ ವರ್ಲ್ಡ್ ರಣಹದ್ದಾಗಿದೆ. ಇದನ್ನು ಗ್ರಿಫನ್ ರಣಹದ್ದು ಎಂದೂ ಕರೆಯಬಹುದು. ಈ ಗ್ರಿಫನ್ ರಣಹದ್ದು 93 ರಿಂದ 122 ಸೆ.ಮೀ (37 ರಿಂದ 48 ಇಂಚು) ಉದ್ದವಿದೆ. ಇದು 2.3 ರಿಂದ 2.8 ಮೀಟರ್ (7.5 ರಿಂದ 9.2 ಅಡಿ) ಉದ್ದದ ರೆಕ್ಕೆಗಳನ್ನು ಹೊಂದಿದೆ. ಗಂಡು ಹಕ್ಕಿಯು 6.2 ರಿಂದ 10.5 ಕೆಜಿ ತೂಕವಿರುತ್ತದೆ ಮತ್ತು ಹೆಣ್ಣು ಹಕ್ಕಿ ಸಾಮಾನ್ಯವಾಗಿ 6.5 ರಿಂದ 10.5 ಕೆಜಿ ತೂಗುತ್ತವೆ. ಆದರೆ ಭಾರತೀಯ ಉಪಜಾತಿಗಳಲ್ಲಿ ರಣಹದ್ದುಗಳು ಸರಾಸರಿ 7.1 ಕೆ.ಜಿ. ತೂಕವಿರುತ್ತವೆ. ವಯಸ್ಕ ಹಕ್ಕಿಯ ತೂಕವು 4.5 ರಿಂದ 15 ಕೆಜಿ ವರೆಗೆ ಇರಲಿದೆ.
ಇಟಲಿಯ ಸಾರ್ಡಿನಿಯಾ ದ್ವೀಪದಲ್ಲಿ ಮಾತ್ರ ಈ ಜಾತಿಯ ರಣಹದ್ದುಗಳು ಕಂಡು ಬರುತ್ತವೆ. ಆದರೆ ಪರ್ಯಾಯ ದ್ವೀಪಗಳಲ್ಲಿಯೂ ಇದನ್ನು ಮರುಪರಿಚಯಿಸುವ ಪ್ರಯತ್ನಗಳನ್ನು ಇತ್ತೀಚೆಗೆ ಮಾಡಲಾಗುತ್ತಿದೆ. ಇತ್ತೀಚೆಗೆ ಇದರ ಜನಸಂಖ್ಯೆಯಲ್ಲೂ ಭಾರಿ ಹೆಚ್ಚಳ ಕಂಡಿದ್ದು, ನೆರೆಹೊರೆಯ ದೇಶಗಳಿಗೂ ಇದನ್ನು ಮರುಪರಿಚಯಿಸುವ ಯೋಜನೆಗಳು ಜಾರಿಗೆ ಬರುತ್ತಿವೆ. ಈ ಪಕ್ಷಿಯನ್ನು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ.
ಭಾರತದ ಉತ್ತರ ಭಾಗ ಹಾಗೂ ವಾಯುವ್ಯ ಭಾರತದಲ್ಲಿ ಈ ರಣಹದ್ದುಗಳು ಕಂಡು ಬರುತ್ತವೆ. ಅಲ್ಲದೆ, ರಾಮನಗರದ ಸುತ್ತಮುತ್ತಲೂ ಈ ರಣಹದ್ದುಗಳು ಕಾಣಸಿಗುತ್ತವೆ. ಚಳಿಗಾಲ ಹಿನ್ನೆಲೆಯಲ್ಲಿ ವಲಸೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಣಹದ್ದು ಹಾರಿಬಿಡುವ ಸಂದರ್ಭದಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ಕಿರಣ್, ತಜ್ಞ ಪಶುವೈದ್ಯೆ ಡಾ.ವಾಣಿ, ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು, ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ ಹಾಗೂ ಮೃಗಾಲಯದ ಸಿಬ್ಬಂದಿ ಇದ್ದರು. (ದಿಗ್ವಿಜಯ ನ್ಯೂಸ್)