ಹೊಸಪೇಟೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಗೊಂದಲ ಮೂಡಿಸಬಾರದು ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಅಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡುವಂತೆ ಹೋರಾಟ ಆರಂಭಿಸಿ ಜ.14 ಕ್ಕೆ ಒಂದು ವರ್ಷ ತುಂಬುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿದೆ. ಅದರ ವರದಿಯೇ ಅಂತಿಮವಾಗಬೇಕು. ಇತ್ತೀಚೆಗೆ ನ್ಯಾಯಾಧೀಶ ಸುಭಾಷ್ ಆಡಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಮೀಸಲಾತಿ ನೀಡುವ ಅಧಿಕಾರ ಶಾಶ್ವತ ಹಿಂದುಳಿದ ಆಯೋಗಕ್ಕಿದೆಯೋ ಅಥವಾ ನ್ಯಾಯಾಧೀಶ ಸುಭಾಷ್ ಸಮಿತಿಗಿದೆಯೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ನಂಬಿಕೆ ಇದೆ. ನಾವು ಹೋರಾಟ ಮಾಡಿದಾಗಲೆಲ್ಲ ಸರ್ಕಾರ ಮನವೊಲಿಸುವ ಪ್ರಯತ್ನ ಮಾಡಿದೆ. ಆದರೂ ನಾವು ಚಳವಳಿ ಮುಂದುವರಿಸಿದ್ದೇವೆ. ಅ.1ರಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ಮೂರು ತಿಂಗಳೊಳಗೆ ಮೀಸಲಾತಿ ನೀಡುವುದಾಗಿ ಹೇಳಿದ್ದರು. ನಾವು ಕಾನೂನಿಗೆ ಗೌರವ ಕೊಟ್ಟು ಸತ್ಯಾಗ್ರಹ ಹಿಂಪಡೆದಿದ್ದೇವೆ ಎಂದು ತಿಳಿಸಿದರು.
ಕೆಲವರು ಹೋರಾಟದ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮರ ಕಾಲದಿಂದಲೂ ಇಂತಹ ಪ್ರವೃತ್ತಿ ಬೆಳೆದು ಬಂದಿದೆ. ಇಂತಹ ಮಾತುಗಳಿಗೆ ಕಿವಿಗೊಡದಿರುವುದು ಒಳಿತು ಎಂದ ಅವರು, ನಮ್ಮ ಗುರಿ ಒಂದೇ, ಅದು 2ಎ ಮೀಸಲಾತಿ ಪಡೆಯುವುದು ಎಂದರು.