ಹೊಸಪೇಟೆ: ರಭಸವಾಗಿ ಹರಿಯುತ್ತಿದ್ದ ನಗರದ ಎಚ್ಎಲ್ ಕಾಲುವೆಯಲ್ಲಿ ಮುಖ ತೊಳೆಯಲು ಇಳಿದಿದ್ದ ವೃದ್ದೆ ಕಾಲುಜಾರಿ ಬಿದ್ದಿದ್ದನ್ನು ನೋಡಿದ ಯುವಕ ಅಜೇಯ್ ಕೂಡಲೇ ನೀರಲ್ಲಿ ಧುಮುಕಿ ಅವರ ಜೀವ ಉಳಿಸಿದ್ದಾನೆ.
ನಗರದ ಆರ್ಟಿಒ ಕಚೇರಿ ಬಳಿ ಹಾದುಹೋಗಿರುವ ಕಾಲುವೆಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಸುಮಾರು 300 ಮೀಟರ್ ದೂರಕ್ಕೆ ವೃದ್ಧೆಯನ್ನು ನೀರು ಎಳೆದೊಯ್ದಿದೆ. ವೃದ್ಧೆ ನೀರಿಗೆ ಬೀಳುತ್ತಿದ್ದಂತೆ ಉಸಿರುಗಟ್ಟಿದ್ದ ಪರಿಣಾಮ ದೇಹ ನಿಶ್ಚಲ ಸ್ಥಿತಿಗೆ ಹೋಗಿತ್ತು. ಯುವಕ ಆಕೆಯನ್ನು ದಡ ಸೇರಿಸಿದ ಬಳಿಕ, ಸ್ಥಳೀಯರು ದೇಹದಿಂದ ನೀರನ್ನು ಹೊರತೆಗೆದರು. ಯುವಕನ ಸಮಯಪ್ರಜ್ಞೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.