ಹೊಸದುರ್ಗ: ಭಗೀರಥ ಜಯಂತ್ಯುತ್ಸವ ಹಾಗೂ ಪೀಠದ ಪುರುಷೋತ್ತಮಾನಂದ ಪುರಿ ಶ್ರೀಗಳ ಪಟ್ಟಾಧಿಕಾರದ 21ನೇ ವರ್ಷದ ವಾರ್ಷಿಕೋತ್ಸವ ಹೊಸದುರ್ಗದ ಭಗೀರಥ ಪೀಠದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಮಂತ್ರಘೋಷಗಳ ಉಚ್ಛಾರಣೆ ಹಾಗೂ ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಭಗೀರಥ ಶ್ರೀಗಳು ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯ ಸಿಂಹಾಸನಾರೋಹಣ ಮಾಡಿ ಧರ್ಮ ಸಂದೇಶ ನೀಡಿದರು.
ಪೀಠಾರೋಹಣಕ್ಕೂ ಮುನ್ನ ಛತ್ರಿ, ಚಾಮರ, ಸಕಲ ಬಿರುದಾವಳಿಗಳೊಂದಿಗೆ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಪೀಠವೇರಿದ ಬಳಿಕ ಕೀರಿಟ ಧಾರಣೆ ಮಾಡಿ ಭಕ್ತಿ ಸಮರ್ಪಿಸಲಾಯಿತು.
ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು, ಗಣ್ಯರು, ಸಾಹಿತಿಗಳು, ರಾಜಕೀಯ ಧುರೀಣರು ಈ ಸಂಭ್ರಮದಲ್ಲಿ ಭಾಗಿಯಾಗಿ ಸ್ವಾಮೀಜಿಗಳ ಪಾದಕ್ಕೆರಗಿ ಆಶೀರ್ವಾದ ಪಡೆದರು.
ಕಾರ್ಯಕ್ರಮದ ಅಂಗವಾಗಿ ಭಾನುವಾರ ಪೀಠದಲ್ಲಿ ಹಾಗೂ ಬ್ರಹ್ಮೈಕ್ಯ ಲೇಪಾಕ್ಷಿ ಶ್ರೀಗಳ ಐಕ್ಯಮಂದಿರದಲ್ಲಿ ಅಭಿಷೇಕ, ಹೋಮ, ಪೂಜಾ ಕಾರ್ಯ ನಡೆದವು. ಇದೇ ವೇಳೆ ಸಾಮೂಹಿಕ ವಿವಾಹ ನೆರವೇರಿದವು.
ಪುರುಷೋತ್ತಮಾನಂದಪುರಿ ಶ್ರೀಗಳು ಪೀಠದ 13 ನೇ ಪೀಠಾಧಿಪತಿಗಳಾದ ಪಟ್ಟಾಭಿಷೇಕದ 21 ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀಗಳ ಪೀಠಾರೋಹಣ ನೆರವೆರಿತು.
ಭದ್ರಾ ನಾಲೆಗೆ ಭಗೀರಥರ ಹೆಸರು: ಈ ವೇಳೆ ಸಂದೇಶ ನೀಡಿದ ಶ್ರೀಗಳು,ಮಠದ ಮುಂಭಾಗ ಹಾದು ಹೋದ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ನಾಲೆಗೆ ಭಗೀರಥ ಮಹರ್ಷಿಯ ಹೆಸರಿಡಬೇಕು ಎಂದರು.
ಉಪ್ಪಾರ ಸಂಸ್ಕೃತಿ ಉಳಿಸಿ ಬೆಳೆಸಲು ಉಪ್ಪಾರ ಸಂಸ್ಕೃತಿ ಬಿಂಬಿಸುವ ಭಗೀರಥ ಥೀಂ ಪಾರ್ಕ್ ಹಾಗೂ ಮಠಕ್ಕೆ ಬರುವ ಭಕ್ತರಿಗೆ ಯಾತ್ರಿ ನಿವಾಸ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಭಗೀರಥ ಗುರುಪೀಠ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಹಿಂದುಳಿದ ಸಮುದಾಯದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ. ಶಿಕ್ಷಣ ಕೊಡಲಾಗುತ್ತಿದೆ. ಶ್ರೀ ಲೇಪಾಕ್ಷಿ ಸ್ವಾಮಿಜಿ ತೋರಿಸಿದ ದಾರಿಯಲ್ಲೆ ನಡೆಯುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು.