ಹೊಸದುರ್ಗ: ಹೆಸರು ಬೆಳೆಗೆ ವಿಮೆ ಮಾಡಿಸಿರುವ ರೈತರು ನಷ್ಟವಾಗಿರುವ ಬಗ್ಗೆ ಕಂಪನಿಗೆ ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಸೂಚಿಸಿದರು.
ತಾಲೂಕಿನ ಮತ್ತೋಡು ಹೋಬಳಿಯ ಹೆಸರು ಬೆಳೆದಿರುವ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರ ಅನುಕೂಲಕ್ಕಾಗಿ 18002005142 ಶುಲ್ಕ ರಹಿತ ಸಂಖ್ಯೆ ತೆರೆಯಲಾಗಿದ್ದು, ಇಲ್ಲಿಗೆ ಕರೆ ಮಾಡಿ ರೈತರು ಬೆಳೆ ನಷ್ಟದ ಮಾಹಿತಿ ನೀಡಬೇಕು. ಅಲ್ಲದೆ ವಿಮೆ ಕಟ್ಟಿದ ರಸೀದಿಯೊಂದಿಗೆ ಹೆಸರು ಬೆಳೆದ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ನಕಲು ಪ್ರತಿಯನ್ನು ಆಯಾ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿರುವ ವಿಮಾ ಪ್ರತಿನಿಧಿಗೆ ಶೀಘ್ರವಾಗಿ ಸಲ್ಲಿಸಬೇಕು ಎಂದರು.
ಈ ಭಾಗದಲ್ಲಿ ಆಗಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದಿಂದ ಯಾವ ರೀತಿಯ ಪರಿಹಾರ ಸಿಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ವಿಮೆ ಮಾಡಿಸಿರುವ ರ್ಯತರಿಗೆ ವಿಮಾ ಕಂಪನಿಗಳು ಅರ್ಜಿ ಸಲ್ಲಿಸಿದ 14 ದಿನದೊಳಗೆ ಪರಿಹಾರದ ಹಣ ನೀಡಬೇಕು ಎಂದು ಸ್ಥಳದಲ್ಲಿದ್ದ ವಿಮಾ ಕಂಪನಿ ಪ್ರತಿನಿಧಿಗಳಿಗೆ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ. ರಮೇಶ್ಕುಮಾರ್, ಉಪ ಕೃಷಿ ನಿರ್ದೇಶಕ ಡಾ.ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ, ತಹಸೀಲ್ದಾರ್ ಮಲ್ಲಿಕಾರ್ಜುನ್ ಇತರರಿದ್ದರು.