ಹೊಸದುರ್ಗ: ತಾಲೂಕಿನ ಕೃಷಿ ಪರಿಕರಗಳ ಮಾರಾಟ ಮಳಿಗೆಗಳ ಮೇಲೆ ರಾಜ್ಯ ಕೃಷಿ ಜಾಗೃತ ದಳದ ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್ ಕುಮಾರ್ ನೇತೃತ್ವದ ತಂಡ ಶುಕ್ರವಾರ ದಿಢೀರ್ ದಾಳಿ ನಡೆಸಿದರು.
ಇಲಾಖೆ ಅನುಮತಿಯಿಲ್ಲದೆ ಮಾರಾಟ ಮಾಡುತ್ತಿದ್ದ ರಾಸಾಯನಿಕ ಕೀಟನಾಶಕದ ಅಂಶ ಒಳಗೊಂಡಿರುವ ಜೈವಿಕ ಉತ್ಪನ್ನಗಳನ್ನು ವಶಪಡಿಸಿಕೊಂಡು ಅವುಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಕೃಷಿ ಇಲಾಖೆಯಡಿ ಪರವಾನಗಿ ಪಡೆದಿರುವ ಕೃಷಿ ಪರಿಕರಗಳ ಮಾರಾಟ ಮಳಿಗೆ ಹಾಗೂ ಸಹಕಾರ ಸಂಘಗಳು ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿ ವೇಳೆ ಸರ್ಕಾರದ ನಿಯಮ ಪಾಲಿಸಲಾಯಿತು. ದಾಸ್ತಾನು ಪುಸ್ತಕವನ್ನು ಕೃಷಿ ಇಲಾಖೆಯಿಂದ ದೃಢೀಕರಿಸಿಕೊಂಡು ಪ್ರತಿ ದಿನದ ವಹಿವಾಟನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಸೂಚಿಸಿದರು.
ಸರ್ಕಾರದಿಂದ ನೋಂದಣಿ ಪಡೆಯದ ಜೈವಿಕ ವಸ್ತುಗಳನ್ನು ಮಾರಾಟ ಮಳಿಗೆಯಲ್ಲಿ ದಾಸ್ತಾನು ಮಾಡಿ ಮಾರುವಂತಿಲ್ಲ. ಈ ನಿಯಮ ಪಾಲಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಈಶ್ವರ್ ಇತರರು ಇದ್ದರು.