ಹಿರಿಯೂರು: ವಿವಿ ಸಾಗರ ಜಲಾಶಯದ ಎಡ-ಬಲ ದಂಡೆ ನಾಲೆ ಮೂಲಕ ಅಚ್ಚುಕಟ್ಟು ಪ್ರದೇಶದ ಕೃಷಿ ಜಮೀನಿಗೆ ಮೇ 19 ರಿಂದ ಜೂನ್ವರೆಗೆ 1.5 ಟಿಎಂಸಿ ಅಡಿ ನೀರು ಹರಿಯಲಿದೆ.
ಜಲಾಶಯದಲ್ಲಿ ಪ್ರಸ್ತುತ 125.30 ಅಡಿ, 26.4 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಪ್ರಸಕ್ತ ವರ್ಷ ಫೆ.4ರಿಂದ ಮಾ.4ರವರೆಗೆ ಮೊದಲ ಕಂತಿನ ನೀರು ಹರಿಸಲಾಗಿದೆ.
ಮಾರ್ಚ್-ಏಪ್ರಿಲ್ನಲ್ಲಿ ಬಿಸಿಲಿನ ತಾಪಮಾನ ಏರಿಕೆಯಾದ ಕಾರಣ ಅಚ್ಚುಕಟ್ಟು ವ್ಯಾಪ್ತಿಯ ತೋಟಗಾರಿಕೆ ಬೆಳೆಗಳಿಗೆ 2ನೇ ಕಂತಿನ ನೀರು ಹರಿಸಲಾಗಿತ್ತು.
ಮೇ ತಿಂಗಳಲ್ಲಿ ಇನ್ನೂ ಹದ ಮಳೆಯಾಗದ ಕಾರಣ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ತೆಂಗು, ಅಡಕೆ, ಬಾಳೆ, ಹತ್ತಿ, ರಾಗಿ, ಭತ್ತ, ರೇಷ್ಮೆ. ಪಪ್ಪಾಯ ಇತರ ಬೆಳೆಗಳಿಗೆ 3ನೇ ಕಂತಿನ ನೀರು ಹರಿಸಲಾಗುತ್ತಿದೆ.
ಅನ್ನದಾತರ ಮೊಗದಲ್ಲಿ ಮಂದಹಾಸ
89 ವರ್ಷಗಳ ನಂತರ ವಿವಿಸಾಗರ ಜಲಾಶಯ ಕೋಡಿ ಬಿದ್ದಿದ್ದರಿಂದ ವರ್ಷದಲ್ಲಿ ಮೂರು ಬಾರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಯಲಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಶುಕ್ರವಾರ ಬೆಳಗ್ಗೆ ಪ್ರಾಯೋಗಿಕವಾಗಿ ಎಡ-ಬಲ ದಂಡೆಗಳಿಗೆ ನೀರು ಹರಿಯುತ್ತಿದೆ.
ರಾತ್ರಿಯಿಂದ ಪೂರ್ಣ ಪ್ರಮಾಣದಲ್ಲಿ ಬಿಡಲಾಗುತ್ತದೆ. ನಾಲೆ, ನದಿ ಪಾತ್ರದ ಜನರು ಎಚ್ಚರವಹಿಸುವಂತೆ ನೀರಾವರಿ ಇಲಾಖೆ ಎಚ್ಚರಿಕೆ ನೀಡಿದೆ.
ವಿವಿ ಸಾಗರ ಎಡ-ಬಲ ದಂಡೆ ನಾಲೆಗಳು ಹಿರಿಯೂರು ನಗರದಲ್ಲಿ ಹಾದು ಹೋಗಿದ್ದು, ತ್ಯಾಜ್ಯ, ಪ್ಲಾಸ್ಟಿಕ್, ಅಪಾಯಕಾರಿ ವಸ್ತುಗಳ ರಾಶಿಯೇ ನಾಲೆಯಲ್ಲಿದೆ.
ಇದರಿಂದ ಕಲುಷಿತ ನೀರು ಜಮೀನುಗಳಿಗೆ ಹರಿಯಲಿದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
ಜಲ್ದಿ ಹೊಳೆಗೆ ಜೀವ ಕಳೆ
89 ವರ್ಷದ ನಂತರ ವಿವಿ ಸಾಗರ ಜಲಾಶಯದಲ್ಲಿ ಜಲ ವೈಭವ ಮೇಳೈಸಿದ್ದು, ಜಲಾಶಯದ ಕೂಗಳತೆ ದೂರದಲ್ಲಿರುವ ಜಲ್ದಿ ಹೊಳೆ- ಕಲ್ಯಾಣಿಗೆ ಜೀವ ಕಳೆ ಬಂದಿದೆ. ಇದು ಸಾವಿರಾರು ಜೀವ ಸಂಕುಲಗಳಿಗೆ ಸಂಜೀವಿನಿಯಾಗಿದೆ.
ವಿವಿ ಸಾಗರ ಅಣೆಕಟ್ಟಿಯಿಂದ ನಾಲೆಗಳಿಗೆ ನೀರು ಹರಿಸುತ್ತಿದ್ದು ಡ್ಯಾಮ್ನ ಗೇಟ್ ಮೂಲಕ ಚಿಮ್ಮುವ ನೀರಿನ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಜಲಾಶಯದ ಸಮೀಪ ಹರಿವ ಜಲಧಾರೆಗೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.