ದೇವದುರ್ಗ: ಗಬ್ಬೂರು ಹೋಬಳಿಯ ಹೊನ್ನಟಗಿ ಗ್ರಾಮಕ್ಕೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಶನಿವಾರ ಭೇಟಿ ನೀಡಿದ್ದರು.
ಹೊನ್ನಟಗಿ ಗ್ರಾಮದಲ್ಲಿ ನೂರೆಂಟು ಸಮಸ್ಯೆ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಜು.12ರಂದು ಗ್ರಾಮ ಸಂಚಾರ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಸಮಸ್ಯೆಗಳ ಮಾಹಿತಿ ಪಡೆದರು. ಗ್ರಾಮದ ಹಳೇ ಗಿರಿಕಿಬಾವಿ ಹಾಗೂ ಕೈಪಂಪ್ ವೀಕ್ಷಣೆ ಮಾಡಿ, ತಕ್ಷಣವೇ ಎರಡು ಹೊಸ ಬೋರ್ವೆಲ್ ಕೊರೆಯಿಸಬೇಕೆಂದು ಪಿಡಿಒಗೆ ಮಹೆಬೂಬ್ಗೆ ಸೂಚನೆ ನೀಡಿದರು.
ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸ್ತಾವನೆ ಅನುಮೋದಿಸಿ ಮೇಲಧಿಕಾರಿಗಳಿಗೆ ಕಳಿಸಲಾಗುವುದು. ಜನರಿಗೆ ಶುದ್ಧ ಕುಡಿವ ನೀರು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡ ನೆಲಸಮ ಮಾಡಲು ಗ್ರಾಪಂ ಮೂಲಕ ಸಹಕಾರ ನೀಡಲಾಗುವುದು. ಈ ಕುರಿತು ಶಿಕ್ಷಣ ಇಲಾಖೆಗೆ ಪತ್ರಬರೆಯುವಂತೆ ಮುಖ್ಯಶಿಕ್ಷಕ ಸಂಗಮೇಶ ಗಬ್ಬೂರುಗೆ ತಿಳಿಸಿದರು.