ಹೊನ್ನಾಳಿ: ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಮೋಶನಲ್ ಬ್ಲಾಕ್ಮೇಲ್ ಮಾಡುತ್ತಿವೆ. ಈ ಸರ್ಕಾರಗಳನ್ನು ಕಿತ್ತುಹಾಕಿ ರೈತರೇ ನಡೆಸುವ ಸರ್ಕಾರ ತರಬೇಕಾಗಿದೆ ಎಂದು ರೈತಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಚೀಲೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಚ್. ಶಿವಾನಂದಪ್ಪಗೌಡ ಅವರ ಸ್ಮರಣೆ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣ ಹಾಗೂ ಭಾರತೀಯ ಸೇನೆಯ ಸೈನಿಕರನ್ನು ರಕ್ಷಣೆ ಮಾಡುವ ಬದಲು ಜನ-ರೈತ ವಿರೋಧಿ ಎಪಿಎಂಸಿ, ಭೂಸುಧಾರಣೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಸಿಸುಳ್ಳು ಹೇಳುತ್ತ ರೈತರನ್ನು ಬ್ಲಾೃಕ್ಮೇಲ್ ಮಾಡುತ್ತಿದ್ದಾರೆ ಎಂದರು.
ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ರೈತರು ಕಾಯ್ದೆಗಳ ಬಗ್ಗೆ ಅರಿವು ಹೊಂದಿರಬೇಕು. ಕೃಷಿಕರ ಬಳಿ ಕಪ್ಪುಹಣ ಇಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕಿದೆ. ರೈತ ವಿರೋಧಿ ಮಸೂದೆಗಳ ಹೋರಾಟ ಮುಂದುವರಿಯುತ್ತದೆ ಎಂದರು.
ರೈತ ಮುಖಂಡ ಚೀಲೂರು ಚಂದ್ರಶೇಖರಗೌಡ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಮೂರ್ತಿ, ಸೊರಬ ತಾಲೂಕು ಅಧ್ಯಕ್ಷ ಮಂಜುನಾಥಗೌಡ, ಕುರುವ ಗಣೇಶ, ಹಿಟ್ಟೂರು ರಾಜು, ಗೊರಟ್ಟಿ ಮಂಜಣ್ಣ, ಕೊಡಚಗೊಂಡನಹಳ್ಳಿ ಸಿದ್ದಪ್ಪ, ಪ್ರಭು, ಶತಕೋಟಿ ಬಸಪ್ಪ, ಕೋಡಿಕೊಪ್ಪ ಶಿವಪ್ಪ, ವಾಸು, ಜಗದೀಶ, ದಿ. ಶಿವಾನಂದಪ್ಪ ಗೌಡ ಅವರ ಕಾರ್ಯಗಳನ್ನು ಸ್ಮರಿಸಿದರು.
ದೊಡ್ಡೇರಿ ಬಸವರಾಜಪ್ಪ ಸ್ವಾಗತಿಸಿದರು. ಕಡದಕಟ್ಟೆ ಮಂಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.