ಕಳಸ: ಕಳೆದ ವರ್ಷ ಆಗಸ್ಟ್ನಲ್ಲಿ ಸುರಿದ ಮಳೆಯಿಂದ ಸೂರು ಕಳೆದುಕೊಂಡು ನಿರಾಶ್ರಿತರಾದವರಿಗೆ ಕಳಸ ನಾಡಕಚೇರಿಯಲ್ಲಿ ಶುಕ್ರವಾರ ನಿವೇಶನ ಹಂಚಿಕೆ ಮಾಡಲಾಯಿತು.
ಕುಂಬಳಡಿಗೆ ಸರ್ವೆ ನಂ.153ರಲ್ಲಿ 50 ನಿರಾಶ್ರಿತ ಫಲಾನುಭವಿಗಳಿಗೆ ನಿವೇಶನ ಗುರುತು ಮಾಡಲಾಗಿತ್ತು. ಸರ್ಕಾರ ಸೂಚಿಸಿದ ಸರ್ವೆ ನಂ.153ರಲ್ಲಿ ಭೂಮಿ ಪಡೆಯುವುದು, ಸ್ವಂತ ಭೂಮಿ ಇದ್ದರೆ ಅದರಲ್ಲಿ ಮನೆ ಕಟ್ಟಿಕೊಳ್ಳುವುದು, ಈ ಹಿಂದಿನ ಸ್ಥಳದಲ್ಲೇ ಇರುವುದು ಮತ್ತು ಸರ್ಕಾರ ನೀಡಿದ 1 ಲಕ್ಷ ರೂ. ವಾಪಸ್ ನೀಡುವ ಮೂರು ಆಯ್ಕೆಯನ್ನು ನೀಡಲಾಗಿತ್ತು.
ಇದಕ್ಕೆ ಒಪ್ಪಿದ ನಿರಾಶ್ರಿತರ 30 ಕುಟುಂಬಗಳು 153 ಸರ್ವೆ ನಂ.ನಲ್ಲಿ ಸರ್ಕಾರ ನೀಡುವ ಭೂಮಿಯಲ್ಲಿ ಮನೆ ಕಟ್ಟುವುದಾಗಿ ತಿಳಿಸಿವೆ. 2 ಕುಟುಂಬಗಳು ಸರ್ಕಾರದ ನಿವೇಶನ ಬೇಡ ಸರ್ಕಾರ ನೀಡಿದ 1 ಲಕ್ಷ ರೂ. ಹಣವನ್ನು ವಾಪಸ್ ಕೊಡುತ್ತೇವೆ ಎಂದರೆ, ಒಂದು ಕುಟುಂಬ ಮಾತ್ರ ತಮ್ಮದೇ ಜಮೀನಲ್ಲಿ ಮನೆ ಕಟ್ಟಿಕೊಳ್ಳುವುದಾಗಿ ತಿಳಿಸಿದೆ. ಉಳಿದ 20 ಕುಟುಂಬಗಳು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.
ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿಕೊಳ್ಳಲು ಸೂಚಿಸಲಾಗಿದೆ. ನಿವೇಶನ ಪಡೆದ 16 ಕುಟುಂಬಗಳು ಮರಸಣಿಗೆ ಗ್ರಾಮದ ಚನ್ನಡ್ಲು ಪ್ರದೇಶದವರು. ಇನ್ನು ಸಂಸೆ 1, ಮಾವಿಕೆರೆ 3, ಕಲ್ಕೋಡು 3, ತಲಗೋಡು 1, ಬಾಳೂರು ಚನ್ನಡ್ಲು ಭಾಗದವರಿದ್ದಾರೆ. ಉಪ ತಹಸೀಲ್ದಾರ್ ಸುಧಾ, ಕಂದಾಯ ಅಧಿಕಾರಿ ಅಜ್ಜೇಗೌಡ ಇತರರಿದ್ದರು.