ದೇವದುರ್ಗ: ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಘೆ, ಚಿಕೂನ್ಗುನ್ಯಾ ಸೇರಿ ನಾನಾ ಕಾಯಿಲೆಗಳು ಹರಡುತ್ತಿವೆ. ಹೀಗಾಗಿ ಗರ್ಭಿಣಿಯರು, ಬಾಣಂತಿಯರು ಸೊಳ್ಳೆಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಹೇಳಿದರು.
ಗಬ್ಬೂರು ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಶ್ರಿತ ರೋಗವಾಹಕಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ತೊಟ್ಟಿ, ಡ್ರಮ್ಮು, ಮಡಕೆ ನೀರು ಸಂಗ್ರಹಿಸುವ ಇತ್ಯಾದಿ ವಸ್ತುಗಳನ್ನು ವಾರದಲ್ಲಿ 2 ಬಾರಿ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ತುಂಬಿಸಬೇಕು. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟರೆ ಸೊಳ್ಳೆಗಳ ಹಾವಳಿ ತಡೆಯಬಹುದು ಎಂದರು.
ಮಲೇರಿಯಾ ತಾಲೂಕು ಮೇಲ್ವಿಚಾರಕ ಓಂಕಾರ ಜಂತೇಕರ್ ಮಾತನಾಡಿ, ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು. ಮಕ್ಕಳು ಮತ್ತು ವಯಸ್ಕರು ಮೈ ತುಂಬ ಬಟ್ಟೆ ಧರಿಸುವ ಬಗ್ಗೆ ಗಮನಹರಿಸಬೇಕು ಎಂದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಜಿ.ಹೂಗಾರ್, ಪಿಎಚ್ಸಿಒ ಸುಧಾರಾಣಿ, ಎಚ್ಐಒ ರವೀಂದ್ರ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.