– ಶಮಿತಾ ಮುತ್ಲಾಜೆ
ಹೋದರ ಸಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಎಷ್ಟೇ ಬೇಜಾರ್ ಅಥವಾ ಕೋಪ ಇದ್ರೂ ರಕ್ಷಾ ಬಂಧನದ ದಿನ ಸಹೋದರರಿಗೆ ರಾಖಿ ಕಟ್ಟೋದನ್ನು ಮಿಸ್ಸ್ ಮಾಡ್ಕೊಳ್ಳದೇ ಇರೋ ತಂಗಿಯಂದಿರಿಗೆ ಈ ಡೇ ತುಂಬಾ ಸ್ಪೆಷಲ್. ಕಟ್ಟಿರೋ ರಾಖಿಗೆ ಸರಿಯಾದ ಗಿಫ್ಟ್ ಸಿಕ್ಕಿಲ್ಲ ಅಂದ್ರೆ ಅವರ ಗೋಳು ಅಣ್ಣಂದಿರಿಗೆ ಮೂರು ಲೋಕನೇ ತೋರಿಸುತ್ತದೆ.
ರಕ್ಷಾ ಬಂಧನಕ್ಕೆ ಪ್ರತಿ ಹಿಂದೂ ಮನೆಗಳಲ್ಲಿ ಹಬ್ಬದ ತಿಂಗಳು ಬರುವ ಮುನ್ನವೇ ತಯಾರಿಗಳು ಆರಂಭವಾಗಿರುತ್ತದೆ. ಸಹೋದರನಿಗೆ ಕಟ್ಟಲು ರಾಖಿಯನ್ನು ಆಯ್ಕೆ ಮಾಡುವ ವಿಚಾರದಲ್ಲೂ ಸಹೋದರಿ ಖುಷಿ ಖುಷಿಯಾಗಿ ಇರುತ್ತಾರೆ. ರಕ್ಷಾ ಬಂಧನದ ಹಿಂದಿನ ದಿನ ರಾತ್ರಿಯೇ ಸಿಹಿ ತಿಂಡಿಗಳನ್ನು ತಯಾರು ಮಾಡಲಾಗುತ್ತಿದೆ.
ಅದೇನೇ ಇದ್ರೂ ಆ ದಿವಸ ತಂಗಿ ಅಣ್ಣಂಗೆ ಸೂಟ್ ಆಗೋ ರಾಖಿಗೆ ಹುಡುಕಾಡೋದು, ಅಣ್ಣ ತಂಗಿಗೆ ಇಷ್ಟ ಆಗೋ ಗಿಫ್ಟ್ ಕೊಡೋಕೆ ಯೋಚಿಸೋದನ್ನ ನೋಡೋದ್ರಲ್ಲಿ ಇರೋ ಖುಷಿನೇ ಬೇರೆ. ಇಷ್ಟೆಲ್ಲಾ ಸಂತಸವನ್ನು ನೀಡುವ ರಕ್ಷಾ ಬಂಧನ ಹುಟ್ಟಿ ಬಂದ ಇತಿಹಾಸದ ಬಗ್ಗೆ ನಾವೀವತ್ತು ತಿಳಿಸಿ ಕೋಡ್ತೀವಿ….
ರಕ್ಷಾ ಬಂಧನದ ಹಬ್ಬವು ಮಹಾಭಾರತದ ಕಾಲದ ಹಿಂದಿನದು. ಪುರಾಣಗಳ ಪ್ರಕಾರ, ಮಹಾಭಾರತದಲ್ಲಿ ಶ್ರೀಕೃಷ್ಣನ ಮಣಿಕಟ್ಟಿನಲ್ಲಿ ರಕ್ತಸ್ರಾವವುಂಟಾದಾಗ ಅದನ್ನು ತಡೆಯಲು ದ್ರೌಪದಿಯು ತನ್ನ ಸೀರೆಯನ್ನು ಹರಿದು ಕೃಷ್ಣನ ಮಣಿಕಟ್ಟಿಗೆ ಕಟ್ಟಿದಳು. ಈ ಸಂದರ್ಭದಲ್ಲಿ ದ್ರೌಪದಿಯ ಪ್ರೀತಿ, ವಾತ್ಸಲ್ಯವನ್ನು ಕಂಡು ಆಕೆಯ ರಕ್ಷಣೆಯನ್ನು ಮಾಡುವುದಾಗಿ ಭರವಸೆಯನ್ನು ನೀಡುತ್ತಾನೆ. ಆ ದಿನದಿಂದ, ಶ್ರೀಕೃಷ್ಣನು ದ್ರೌಪದಿಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅಂದಿನಿಂದ ಇಂದಿನವರೆಗೂ ಪವಿತ್ರ ರಕ್ಷಬಂಧನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ದಂತಕತೆಗಳ ಪ್ರಕಾರ, ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.
ದಂತಕಥೆಯ ಪ್ರಕಾರ, ರಕ್ಷಾ ಬಂಧನವು ಯಮ ಹಾಗೂ ಯಮುನಾ ನದಿಗೂ ಸಂಬಂಧಿಸಿದೆ. ಯಮುನೆಯು ಸಾವಿನ ಅಧಿಪತಿಯಾದ ಯಮರಾಜನಿಗೆ ರಾಖಿಯನ್ನು ಕಟ್ಟುತ್ತಾಳೆ. ಆಗ ಯಮನು ಆಕೆಗೆ ಮರಣತ್ವದಿಂದ ಮುಕ್ತಿಯನ್ನು ನೀಡುತ್ತಾನೆ ಅಂದಿನಿಂದ ಆಚರಣೆ ಮಾಡಲಾಗುತ್ತದೆ ಎನ್ನಲಾಗುತ್ತದೆ.
ಚಿತ್ತೋರ್ನ ರಾಣಿ ಕರ್ಣಾವತಿ ಮತ್ತು ಮೊಘಲ್ ಚಕ್ರವರ್ತಿ ಹುಮಾಯೂನ್ನ ಬಾಂಧವ್ಯವು ರಕ್ಷಾಬಂಧನಕ್ಕೆ ಸಂಬಂಧಿಸಿದೆ. ಚಿತ್ತೋರ್ನ ರಾಜ ರಾಣಾ ಸಂಗನ ಮರಣದ ನಂತರ ಆತನ ಮಡದಿ ರಾಣಿ ಕರ್ಣಾವತಿ ರಾಜ್ಯಾಳ್ವಿಕೆಯನ್ನು ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಈಕೆಯ ರಾಜ್ಯದ ಮೇಲೆ ಗುಜರಾತಿನ ಸುಲ್ತಾನ ಬಹದ್ದೂರ್ ಷಾ ದಂಡೆತ್ತಿ ಬರುತ್ತಾನೆ. ಆಕೆಗೆ ರಾಜ್ಯ ರಕ್ಷಣೆ ಸಾಧ್ಯವಾಗುವುದಿಲ್ಲ. ಈ ವೇಳೆ ರಾಣಿ ಕರ್ಣಾವತಿ ಮೊಘಲ್ ಚಕ್ರವರ್ತಿ ಹುಮಾಯೂನ್ಗೆ ದೇಶ ರಕ್ಷಣೆಯನ್ನು ಮಾಡುವಂತೆ ರಾಖಿಯನ್ನು ಕಳುಹಿಸುತ್ತಾಳೆ. ನಂತರ ಹುಮಾಯೂನ್ ಆಕೆಯ ಮನವಿಯನ್ನು ಸ್ವೀಕರಿಸಿ ಚಿತ್ತೋರ್ ರಾಜ್ಯದ ರಕ್ಷಣೆಯನ್ನು ಮಾಡುತ್ತಾನೆ. ಅಂದಿನಿಂದ ಇಂದಿನವರೆಗೂ ಪವಿತ್ರ ರಕ್ಷಬಂಧನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ರಕ್ಷಾ ಬಂಧನ ಮಹತ್ವ: ಈ ದಿನದಂದು, ಸಹೋದರಿಯರು ತಮ್ಮ ಸಹೋದರನ ಕೈಗೆ ಪವಿತ್ರ ರಾಖಿ ಕಟ್ಟುತ್ತಾರೆ. ಜೊತೆಗೆ ಅವರಿಗೆ ದೀರ್ಘ, ಸಮೃದ್ಧ ಮತ್ತು ಸಂತೋಷದ ಜೀವನವನ್ನು ಹಾರೈಸುತ್ತಾರೆ. ಆದರ ಪ್ರತಿಯಾಗಿ, ಸಹೋದರರು ತಮ್ಮ ಜೀವನದುದ್ದಕ್ಕೂ ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.
ಹೀಗೆ ರಕ್ಷಾ ಬಂಧನ ಹಬ್ಬಕ್ಕೆ ಒಂದೊಂದು ಕಥೆ ಇದೆ. ರಕ್ಷಾ ಬಂಧನ ಎಂದರೆ ಸಹೋದರತ್ವವನ್ನು ಸಾರುವ ಹಬ್ಬ. ಒಡಹುಟ್ಟಿದವರ ಪ್ರಾಮುಖ್ಯತೆಯನ್ನು ಸಾರುವ ದಿನ. ಈ ಹಬ್ಬದ ಇತಿಹಾಸವನ್ನು ನೀವು ತಿಳಿದುಕೊಂಡು, ಇನ್ನೊಬ್ಬರಿಗೂ ತಿಳಿಸುವ ಮೂಲಕ ಸಂತಸದಿಂದ ಆಚರಿಸೋಣ….