ಚನ್ನಮ್ಮ ಕಿತ್ತೂರು: ಇತಿಹಾಸ ರಚನೆಯಲ್ಲಿ ನಾಣ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಪರಂಪರೆ ಮತ್ತು ಪ್ರಾಚ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ನಾಣ್ಯ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಕ್ಯುರೇಟರ್ ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿ, ನಾಣ್ಯಗಳು ಐತಿಹಾಸಿಕ ಮೂಲಾಧಾರಗಳಲ್ಲಿ ಪ್ರಮುಖ ಆಧಾರಗಳಾಗಿದ್ದು, ಇತಿಹಾಸಕಾರರು ಅವುಗಳನ್ನು ಅಗತ್ಯ ದಾಖಲೆಯಾಗಿ ಬಳಸಿ ಇತಿಹಾಸ ಕಟ್ಟುತ್ತಾರೆ. ನಾಣ್ಯ ಪ್ರದರ್ಶನ ಅತ್ಯಂತ ಶ್ರಮದಾಯಕ ಕಾರ್ಯ ಎಂದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಸ್. ಬಿ.ದಳವಾಯಿ, ಪ್ರಾಚಾರ್ಯ ಜಿ.ಎಂ. ಗಣಾಚಾರಿ ಮಾತನಾಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಅವರು ನಾಣ್ಯಗಳನ್ನು ವೀಕ್ಷಿಸಿ, ಅಂದಿನ ಸಂಸ್ಕೃತಿ ಹಾಗೂ ಆರ್ಥಿಕ ವ್ಯವಸ್ಥೆ ಸಂಕೇತಿಸುತ್ತವೆ ಎಂದರು.
ನಾಣ್ಯಗಳನ್ನು ಪ್ರದರ್ಶಿಸಿದ ವಿದ್ವಾಂಸರಾದ ಭರತಕುಮಾರ ಆಲೂರು, ವಿವೇಕ ಶ್ರೀಪಾದ ಬೋರಕರ ಅವರನ್ನು ಸನ್ಮಾನಿಸಲಾಯಿತು. ಸುಮಾರು 5000 ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಶಿಕ್ಷಕರು ಇದ್ದರು. ಮಹೇಶ ಚನ್ನಂಗಿ, ಬಿ.ಸಿ.ಬಿದರಿ, ಮಂಜುನಾಥ ಕಳಸಣ್ಣವರ, ರಾಜಶೇಖರ ರಗಟಿ, ಮಹೇಶ್ವರ ಹೊಂಗಲ ಇತರರಿದ್ದರು.