ಹಿರಿಯೂರು: ತಾಲೂಕಿನಲ್ಲಿ ಮಿಡತೆ ಹಾವಳಿ ಭೀತಿ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಹಿರಿಯೂರು ನಗರದ ಸುತ್ತಲಿನ ಪ್ರದೇಶದಲ್ಲಿ ಕಂಡುಬಂದ ಮಿಡತೆಗಳ ಹಿಂಡನ್ನು ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ರೈತರಲ್ಲಿ ಆತಂಕ ಸೃಷ್ಟಿಸಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿದ ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳು ಎಕ್ಕದ ಗಿಡದಲ್ಲಿ ಕಂಡುಬಂದಿರುವ ಮಿಡತೆಗಳ ಬಗ್ಗೆ ಭಯ ಬೇಡ. ಇವು ಸ್ಥಳೀಯವಾಗಿ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗಿ ಕಂಡಬರುತ್ತವೆ. ಈ ಮಿಡತೆಗಳು ಎಕ್ಕದ ಗಿಡದ ಎಲೆಗಳನ್ನು ಮಾತ್ರ ತಿನ್ನುತ್ತವೆ. ರೈತರ ಫಸಲಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ರೈತರು, ಕೃಷಿ ಅಧಿಕಾರಿಗಳಿಗೆ ಕರೆ ಮಾಡಿ ಮಿಡತೆ ದಾಳಿ ಬಗ್ಗೆ ಸ್ಪಷ್ಟನೆ ಕೇಳಿತ್ತಿದ್ದರು. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ತಜ್ಞರು ಪರಿಶೀಲಿಸಿ ಮಾಹಿತಿ ನೀಡಿದ್ದಾರೆ.
ಹಿರಿಯೂರು ಸುತ್ತಲಿನ ಪ್ರದೇಶದಲ್ಲಿ ಕಂಡುಬಂದಿರುವ ಸ್ಥಳೀಯ ಮಿಡತೆಗಳ ಬಗ್ಗೆ ಆತಂಕ ಬೇಡ. ಇವು ಮರುಭೂಮಿ ಮಿಡತೆಗಳಲ್ಲ.
ಪ್ರಕಾಶ್ ಕೃಷಿ ವಿಜ್ಞಾನಿ
ಕೃಷಿ ಸಂಶೋಧನ ಕೇಂದ್ರ, ಬಬ್ಬೂರು