ಹಿರಿಯೂರು: ತಾಲೂಕಿನ ಬೀರೇನಹಳ್ಳಿ ವಿದ್ಯುತ್ ಪವರ್ ಗ್ರಿಡ್ನಿಂದ ಮೈಸೂರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕಂಪನಿಯು ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದು ರೈತರು ದೂರಿದ್ದಾರೆ.
ಬೀರೇನಹಳ್ಳಿ ಪವರ್ ಗ್ರಿಡ್ನಿಂದ ಮೈಸೂರಿಗೆ 400 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಗೋಪುರ ನಿರ್ಮಿಸಿ ಲೈನ್ ಹಾಕಲಾಗುತ್ತಿದ್ದು, ಮೈಸೂರು ಜಿಲ್ಲೆ ವ್ಯಾಪ್ತಿಯ ರೈತರಿಗೆ ಒಂದು ಗುಂಟೆಗೆ 62 ಸಾವಿರ ರೂ. ಪರಿಹಾರ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ ಐದು ಸಾವಿರ ರೂ. ನಿಗದಿ ಮಾಡಲಾಗಿದೆ. ಜಿಲ್ಲಾಧಿಕಾರಿ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದರು. ಕರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯವನ್ನು ಲಾಕ್ಡೌನ್ ಮಾಡಿದ್ದರೂ ಪೊಲೀಸ್ ಬಂದೋಬಸ್ತಿನಲ್ಲಿ ಲೈನ್ ಅಳವಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಮಾರ್ಗ ಕಾಮಗಾರಿ ಆರಂಭಕ್ಕೂ ಮುನ್ನ ಸಂಬಂಧಿಸಿ ರೈತರಿಗೆ ನೋಟಿಸ್ ಮೂಲಕ ವಿಷಯ ತಿಳಿಸಿಲ್ಲ. ಹೊಲಗಳಲ್ಲಿ ಪೊಲೀಸ್ ರಕ್ಷಣೆಯಲ್ಲಿ ಅನಧಿಕೃತವಾಗಿ ಪ್ರವೇಶಿಸಿ ವಿದ್ಯುತ್ ಗೋಪುರ ಹಾಕುತ್ತಿದ್ದಾರೆ. ಇದರಿಂದ ಜಮೀನಿನಲ್ಲಿ ಬೆಳೆಯುವ ಬೆಳೆ, ಮರಗಿಡಕ್ಕೆ ಹಾನಿಯಾಗುವ ಆತಂಕವಿದೆ ಎಂದು ದೂರಿದರು.
ಎಸಿ ಭೇಟಿ: ಸ್ಥಳಕ್ಕೆ ಎಸಿ ಪ್ರಸನ್ನ ಕುಮಾರ್ ಭೇಟಿ ನೀಡಿ, ರೈತರ ಮನವೊಲಿಸಲು ಯತ್ನಿಸಿದರು. ಹೆಚ್ಚಿನ ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಟಿಎಚ್ಒ ಸ್ಪಷ್ಟನೆ: ವಿದ್ಯುತ್ ಲೈನ್ ಅಳವಡಿಸಲು ಪಶ್ಚಿಮಬಂಗಾಳದಿಂದ ಆಗಮಿಸಿದ ಕೂಲಿ ಕಾರ್ಮಿಕರಲ್ಲಿ ಕೆಲವರಿಗೆ ಕೆಮ್ಮು-ಶೀತ ಇದ್ದ ಕಾರಣ ಹೋಮ್ ಕ್ವಾರಂಟೈನ್ಗೆ ಒಳಪಡಿಸಿದ್ದು, ಅವರಲ್ಲಿ ಯಾವುದೇ ರೀತಿಯ ಸೋಂಕು ಇಲ್ಲ ಎಂದು ಟಿಎಚ್ಒ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ತಹಸೀಲ್ದಾರ್ ಸತ್ಯನಾರಾಯಣ, ಡಿವೈಎಸ್ಪಿ ರಮೇಶ್, ಸಿಪಿಐ ರಾಘವೇಂದ್ರ, ಪಿಎಸ್ಐ ಪರಮೇಶ್, ರೈತ ಮುಖಂಡರಾದ ಪಾಂಡುರಂಗ, ಕುಮಾರ್, ಪವರ್ ಗ್ರಿಡ್ ಸೀನಿಯರ್ ಜನರಲ್ ಮ್ಯಾನೇಜರ್ ಸಿ.ಡಿ. ಕಿಶೋರ್ ಇತರರಿದ್ದರು.