ಹಿರಿಯೂರು: ಇಲ್ಲಿನ ಐತಿಹಾಸಿಕ ಪ್ರಸಿದ್ಧ ತೇರುಮಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಬುಧವಾರ ರಾತ್ರಿ ಕರ್ಪೂರದಾರತಿ ಧಾರ್ಮಿಕ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ, ಉಮಾಮಹೇಶ್ವರಸ್ವಾಮಿ ರಥಾವರೋಹಣ ಉತ್ಸವದ ನಂತರ, ರಾತ್ರಿ 8ಕ್ಕೆ ದೇವಸ್ಥಾನ ಆವರಣದಲ್ಲಿನ ಎತ್ತರದ ಸ್ತಂಬದ ಮೇಲೆ ಕರ್ಪೂರದ ದೀಪ ಹಚ್ಚಿದ ನಂತರ, ಸ್ತಂಬದ ಬಳಿ ನೆರೆದಿದ್ದ ಭಕ್ತರು ದೇವಸ್ಥಾನದ ಸುತ್ತಲೂ ಕರ್ಪೂರದ ರಾಶಿ ಹಾಕಿ ಬೆಳಗಿಸಿದಾಗ ಇಡೀ ದೇಗುಲ ಬೆಳಕಿನಿಂದ ಝಗಮಗಿಸಿದ್ದು ನೋಡುಗರ ಗಮನ ಸೆಳೆಯಿತು.
ದೀಪ ಸ್ತಂಭ: ಗರ್ಭಗುಡಿ ಮುಂಭಾಗದಲ್ಲಿರುವ 56 ಅಡಿ ಎತ್ತರದ ಸ್ತಂಭ ಮತ್ತು 20 ಅಡಿ ಎತ್ತರದ ಬಸವಣ್ಣ ದೇವರ ಏಕಶಿಲಾ ದೀಪ ಸ್ತಂಬದ ತುದಿಯಲ್ಲಿ ಎಂಟು ಲೋಹದ ದೀಪಗಳಿದ್ದು, ಅವುಗಳಿಗೆ ಎಣ್ಣೆ ಮತ್ತು ಕರ್ಪೂರ ಹಾಕಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅವುಗಳನ್ನು ಬೆಳಗಿಸಲಾಯಿತು.
ಈ ದೀಪದ ಬೆಳಕು ನಾಲ್ಕೈದು ಕಿ.ಮೀ ದೂರದವರೆಗೆ ಆಕರ್ಷಕವಾಗಿ ಕಂಡುಬಂದಿತು. ತಹಸೀಲ್ದಾರ್ ಸತ್ಯನಾರಾಯಣ, ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಈ.ಮಂಜುನಾಥ್, ಜಿ.ಪ್ರೇಮ್ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್.ಸಾದತ್ ಉಲ್ಲಾ, ಅರ್ಚಕ ವಿಶ್ವನಾಥಾಚಾರ್, ಆರ್.ಐ.ಲಕ್ಷ್ಮಣ್ಣ, ದೇವಸ್ಥಾನ ಸೇವಾ ಸಮಿತಿ ಸದಸ್ಯರಿದ್ದರು.