ಹಿರಿಯೂರು: ಕರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಸತ್ಯನಾರಾಯಣ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಗುರುವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ 4 ಸಾವಿರ ಮಾಸ್ಕ್ ವಿತರಿಸಿ ಮಾತನಾಡಿದರು.
ಕರೊನಾ ವಿರುದ್ಧ ಹೋರಾಟವನ್ನು ಜನತೆ ಗಂಭೀರವಾಗಿ ಪರಿಗಣಿಸಬೇಕು. ಏ.14ರ ವರೆಗೆ ವಿನಾಕಾರಣ ಸುತ್ತಾಡುವುದನ್ನು ಬಿಟ್ಟು ಮನೆಯಲ್ಲಿರಬೇಕು. ಇದರಿಂದ ರೋಗ ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯ ಎಂದು ತಿಳಿಸಿದರು.
ಸಿಪಿಐ ರಾಘವೇಂದ್ರ ಮಾತನಾಡಿ, ಕರೊನಾ ವಿರುದ್ಧದ ಹೋರಾಟಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಪೌರಾಯುಕ್ತ ಶಿವಪ್ರಸಾದ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯ ಜತೆ ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ವೈರಸ್ ನಿಯಂತ್ರಣಕ್ಕೆ ಪೌರ ಕಾರ್ಮಿಕರು ಬಹಳಷ್ಟು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ರೆಡ್ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಸುಂದರ್ರಾಜ್, ಎಂ.ಎಸ್.ರಾಘವೇಂದ್ರ, ಕೇಶವಮೂರ್ತಿ, ಎ.ರಾಘವೇಂದ್ರ, ಸಣ್ಣಭೀಮಣ್ಣ, ನಾರಾಯಣಾಚಾರ್, ಬಿ.ಎಸ್.ನವಾಬ್ ಸಾಬ್, ಸತೀಶ್ ಬಾಬು ಇತರರಿದ್ದರು.