ಹಿರಿಯೂರು: ಮಾನವನ ದುರಾಸೆಯಿಂದಲೇ ಪರಿಸರ ನಾಶವಾಗುತ್ತಿದೆ. ಆತನಿಂದಲೇ ಸರಿಯಾಗಬೇಕಿದೆ ಎಂದು ಆರ್ಎಸ್ಎಸ್ ದಕ್ಷಿಣ ಭಾರತ ಪ್ರಮುಖ್ ನಾ.ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಹೊಸಯಳನಾಡು ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು.
ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ, ಪ್ರಕೃತಿ ವಿನಾಶದ ಅಂಚಿಗೆ ತಲುಪುವ ಅಪಾಯವಿದೆ. ಪರಿಸರ ದಿನಾಚರಣೆ ನಿರಂತರವಾಗಿ ನಡೆಯಬೇಕು ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜ್ ಮಾತನಾಡಿ ಪರಿಸರ ಪ್ರತಿಯೊಂದು ಜೀವ ಸಂಕುಲಕ್ಕೆ ಅನಿವಾರ್ಯ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು ಎಂದರು. ಪ್ರಾಚಾರ್ಯ ಚಂದ್ರಯ್ಯ, ತಿಮ್ಮಶ್ರೇಷ್ಠಿ, ಹರ್ಷ, ನವೀನ್, ಹಿರೇಗೌಡರ್, ರಾಜಣ್ಣ, ಕೃಷ್ಣಮೂರ್ತಿ, ಶಿವಮೂರ್ತಿ, ಗಿರಿಸ್ವಾಮಿ ಇತರರಿದ್ದರು.