ಹಿರಿಯೂರು: ವಾಣಿ ವಿಲಾಸ ಸಾಗರದ ನಾಲೆಗಳ ಜಂಗಲ್ ತೆರವು, ಹೂಳು ತೆಗೆಯುವ ಕಾಮಗಾರಿ ಕ್ರಿಯಾಯೋಜನೆಗೆ ಟಿ.ನಾಗೇನಹಳ್ಳಿ ಬಳಿಯ ನಾಲೆಯನ್ನು ಸೇರಿಸಿಲ್ಲ ಎಂದು ಆರೋಪಿಸಿ ಬುಧವಾರ ರೈತ ಸಂಘ ಪದಾಧಿಕಾರಿಗಳು ನಾಲೆ ಬಳಿ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನಾಲೆ ಸ್ವಚ್ಛಗೊಳಿಸುವ ಕಾಮಗಾರಿಯ ಕ್ರಿಯಾಯೋಜನೆ ತಯಾರಿಸುವಾಗ ಟಿ.ನಾಗೇನಹಳ್ಳಿ ಭಾಗದ ನಾಲೆ ಸೇರಿಸಿಲ್ಲ. ಇದರಿಂದ ರಂಗನಾಥಪುರ, ನಾಗೇನಹಳ್ಳಿ, ಉಪ್ಪಳಗೆರೆ, ಕೂಡ್ಲಹಳ್ಳಿ, ಆರನಕಟ್ಟೆ ಹಾಗೂ ದೊಡ್ಡಕಟ್ಟೆ ಗ್ರಾಮ ವ್ಯಾಪ್ತಿಯ 1500 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದು ಅಸಾಧ್ಯವಾಗಿದೆ. ಸಂಬಂಧಪಟ್ಟವರು ಕೂಡಲೇ ನಾಲೆಗಳಲ್ಲಿ ಬೆಳೆದ ಜಂಗಲ್ ತೆರವುಗೊಳಿಸಿ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಹಾಸ ಮಾತನಾಡಿ, ಕಂಟ್ರ್ಯಾಕ್ಟರ್ ಅವರಿಗೆ ಹೇಳಿ ಜಂಗಲ್ ತೆರವುಗೊಳಿಸಿ ನೀರು ಹೋಗಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಆರನಕಟ್ಟೆ ಶಿವಕುಮಾರ್, ಸಿದ್ದರಾಮಣ್ಣ, ಒ.ಶಿವಕುಮಾರ್, ರಂಗನಾಥಪುರ ತಿಮ್ಮಣ್ಣ, ರಾಘವೇಂದ್ರ, ಕೃಷ್ಣಪ್ಪ, ಲೋಕೇಶಗೌಡ, ಚಂದ್ರಶೇಖರ್, ವಿರೇಂದ್ರನಾಥ್, ಗಿರೀಶ್ ಇತರರಿದ್ದರು.