ಚಿತ್ರದುರ್ಗ: ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಹಿಂದೂ ಮಹಿಳೆಯೊಬ್ಬಳು ಪ್ರತಿನಿತ್ಯ ಚಿತ್ರಹಿಂಸೆ ಅನುಭವಿಸುತ್ತಿರುವ ಘಟನೆ ಚಿತ್ರದುರ್ಗ ನಗರದ ನೆಹರು ಬಡಾವಣೆಯಲ್ಲಿ ನಡೆದಿದೆ.
ಹಿಂದೂ ವಿವಾಹಿತ ಮಹಿಳೆಯಾದ ಉಮಾಗೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೇಳೆ ಅಬ್ದುಲ್ ಖಾದರ್ ಎಂಬಾತನ ಪರಿಚಯವಾಗುತ್ತೆ. ನಂತರ ಪರಿಚಯ ಪ್ರೀತಿಗೆ ತಿರುಗುತ್ತೆ. ಉಮಾ ಎರಡು ವರ್ಷದ ಹಿಂದೆ ಮೊದಲ ಪತಿಗೆ ಡಿವೋರ್ಸ್ ಕೊಟ್ಟು ಅಬ್ದುಲ್ ಜತೆ ವಿವಾಹವಾಗುತ್ತಾಳೆ. ಇದಾದ ನಂತರ ಒಂದು ವರ್ಷ ಸುಖವಾಗಿದ್ದ ಸಂಸಾರದಲ್ಲಿ ಇದ್ದಕ್ಕಿದಂತೆ ಸಮಸ್ಯೆ ಶುರುವಾಗುತ್ತೆ.
ಮದುವೆಯಾದ ಒಂದು ವರ್ಷದ ಬಳಿಕ ಉಮಾಗೆ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಆಕೆಯ ಎರಡೂ ಕಾಲುಗಳು ನಿಷ್ಕ್ರಿಯಗೊಂಡು ಹಾಸಿಗೆ ಹಿಡಿಯುವ ಸ್ಥಿತಿ ಉಂಟಾಗಿದೆ. ಅವಳನ್ನು ನೋಡಿಕೊಳ್ಳಲು ಇಷ್ಟವಿಲ್ಲದ ಪತಿ ಆಕೆಯ ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದಲ್ಲದೇ, ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾನೆ. ಜತೆಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಡ ಹೇರಿದ್ದಾನೆ. ಈ ಬಗ್ಗೆ ಉಮಾ ಶಿವಮೊಗ್ಗದ ತನ್ನ ಸಂಬಂಧಿ ವಿಶ್ವನಾಥ್ಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದ ಕೂಡಲೇ ವಿಶ್ವನಾಥ್, ಉಮಾ ಮನೆಗೆ ಬಂದಿದ್ದಾರೆ. ಆಗ ಉಮಾ, ತನ್ನನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಉಮಾಳ ಮೊಬೈಲ್ ಫೋನನ್ನು ಅಬ್ದುಲ್ ಒಡೆದು ಹಾಕಿದ್ದಾನೆ. ಸದ್ಯ ವಿಶ್ವನಾಥ್ ಮೂಲಕ ಪೊಲೀಸರ ನೆರವು ಪಡೆದ ಉಮಾ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಮಹಿಳಾ ಠಾಣೆ ಪೊಲೀಸರು ಅಬ್ದುಲ್ ಖಾದರ್ನನ್ನು ಬಂಧಿಸಿದ್ದಾರೆ.