ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಉರುವಲು ಜಾತಿಯ ಮರದ ಕಳ್ಳಸಾಗಣೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾದ ಹಿಮಾಚಲ ಪ್ರದೇಶ ಸರ್ಕಾರ, ಮಾವು ಮತ್ತು ಇತರ ಐದು ಜಾತಿಯ ಮರಗಳ ಕಡಿಯುವಿಕೆಗೆ ಇದೀಗ ನಿಷೇಧವನ್ನು ಹೇರಿದೆ.
ಇದನ್ನೂ ಓದಿ: ಚಂದಮಾಮನ ಮೈಮೇಲಿದೆ ಸ್ಫೋಟಕ ವಸ್ತು! ಚಂದ್ರನ ಮೇಲೆ ‘ಪ್ರಜ್ಞಾನ್’ಗೆ ಬೇರೆ ಏನೆಲ್ಲಾ ಸಿಕ್ತು?
ಮಾವು, ತ್ರಿಯಾಂಬಲ್ (ಫಿಕಸ್ ಜಾತಿಗಳು), ಟೂನ್ (ಟೂನಾ ಸಿಲಿಯಾಟಾ), ಪದಮ್ ಅಥವಾ ಪಜ್ಜ (ಪ್ರುನಸ್ ಸೆರಾಸಸ್), ರೀತಾ (ಸಪಿಂಡಸ್ ಮುಕೊರೊಸ್ಸಿ) ಮತ್ತು ಬಾನ್ (ಕ್ವೆರ್ಕಸ್ ಲ್ಯುಕೋಟ್ರಿಕೋಫೊರಾ) ಮರಗಳ ಕಡಿಯುವಿಕೆ ನಿಷೇಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು, “ಈ ಆರು ಜಾತಿಯ ಮರ ಮತ್ತು ಇಂಧನ ಮರವನ್ನು ರಾಜ್ಯದಿಂದ ಹೊರಗೆ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಈ ಕ್ರಮವು ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕುವ ಮತ್ತು ಪ್ರದೇಶದ ಅಮೂಲ್ಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ” ಎಂದು ಹೇಳಿದರು.
“ಹೊಸ ನಿಯಮಗಳ ಅಡಿಯಲ್ಲಿ, ಈ ಎಲ್ಲಾ ಆರು ಜಾತಿಗಳ ಮರಗಳು ಕಡಿಯುವಿಕೆಗೆ ತುತ್ತಾಗುವ ಮುನ್ನ ಕನಿಷ್ಠ ಹತ್ತು ವರ್ಷಗಳು ಉಳಿಯಬೇಕು ಎಂಬ ನಿಟ್ಟಿನಲ್ಲಿ ತರಲಾಗಿದೆ. ಉಲ್ಲೇಖಿಸಿರುವ ಮರಗಳಲ್ಲಿ ಯಾವುದೇ ಮರವನ್ನು ಕಡಿಯುವುದಾದರೆ, ಅರಣ್ಯ ಇಲಾಖೆಯ ಅನುಮತಿಯ ನಂತರವೇ ಕೊಡಲಿ ಹಾಕಬೇಕು” ಎಂದು ಸಿಎಂ ಹೇಳಿದರು.
“ಅನುಮತಿಸುವ ಮರದ ಜಾತಿಗಳ ಪರಿಷ್ಕೃತ ಪಟ್ಟಿಯನ್ನು ಸೂಚಿಸಲಾಗಿದೆ. ಈ ಕ್ರಮವು ಸ್ಥಳೀಯ ತಳಿಗಳನ್ನು ರಕ್ಷಣೆ ಮಾಡುವುದಲ್ಲದೆ, ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ,(ಏಜೆನ್ಸೀಸ್).