ಉಡುಪಿ: ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿಯಿರುವ ಕುಂಡೇಲುಕಾಡಿನಲ್ಲಿ ಭೂಕುಸಿತವಾಗಿದ್ದು, ಸಮೀಪದಲ್ಲಿರುವ ಬಹುಮಹಡಿ ಕಟ್ಟಡಕ್ಕೆ ಅಪಾಯ ಉಂಟಾಗಿದೆ.
ಕೆಳಗಿನ ಗುಡ್ಡ ಮೋರಿ ಸಹಿತ ಜರಿದು ಬಿದ್ದಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿ ವಾಸವಾಗಿರುವ ಕುಟುಂಬಗಳನ್ನು ಅಧಿಕಾರಿಗಳು ಸ್ಥಳಾಂತರಗೊಳಿಸುತ್ತಿದ್ದಾರೆ.
ಉಡುಪಿಯಲ್ಲಿ ಕಳೆದ 3-4 ದಿನದಿಂದ ನಿರಂತರ ಮಳೆಯಾಗುತ್ತಿದ್ದು, ತೇವಾಂಶ ಹೆಚ್ಚಾಗಿರುವ ಕಾರಣ ಭೂ ಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 169 ಎ ಸಮೀಪದಲ್ಲಿರುವ 10 ಮಹಡಿಗಳ ಈ ಕಟ್ಟಡದಲ್ಲಿ 32 ಮನೆಗಳಿದ್ದು, 22 ಕುಟುಂಬಗಳು ವಾಸವಾಗಿವೆ.
ಕೆಳ ಮಹಡಿಯಲ್ಲಿ ಫಿಜಾ ಅಂಗಡಿಗಳಿದ್ದು, ಮುಚ್ಚಿಸಲಾಗಿದೆ. ಕಟ್ಟಡ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ಥಳಕ್ಕೆ ಕುಂದಾಪುರ ಸಹಾಯಕ ಆಯುಕ್ತ ರಾಜು, ಪೌರಾಯುಕ್ತ ಆನಂದ ಕಲ್ಲೋಳಿಕರ್, ಜಿಪಂ ಅಧ್ಯಕ್ಷ ದಿನಕರ ಬಾಬು ಭೇಟಿ ನೀಡಿದ್ದಾರೆ.