ಹುಬ್ಬಳ್ಳಿ: ಉನ್ನತ ಶಿಕ್ಷಣ-ಶಿಕ್ಷಕರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದೆಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ (ಎಬಿಆರ್ಎಸ್ಎಂ)ದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರ ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ಮಹಾಸಂಘದ ನಿಯೋಗಕ್ಕೆ ಕೇಂದ್ರ ಸಚಿವರು ಈ ಭರವಸೆ ನೀಡಿದ್ದಾರೆ. ನಿಯೋಗವು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ)ದ ಚೇರಮನ್ ಎಂ. ಜಗದೀಶ ಕುಮಾರ ಅವರನ್ನು ಸಹ ಭೇಟಿ ಮಾಡಿತ್ತು.
ಯುಜಿಸಿ ನಿಯಮಾವಳಿ 2018ರ ಕುರಿತು ರಚಿಸಲಾದ ಅಸಂಗತ ಪರಿಹಾರ ಸಮಿತಿಯ ವರದಿಯನ್ನು ಬಿಡುಗಡೆ ಮಾಡಲಾಗುವುದು. ಉನ್ನತ ಶಿಕ್ಷಣ ಶಿಕ್ಷಕರು ವೃತ್ತಿ ಪ್ರಗತಿ ಯೋಜನೆಗಾಗಿ ಯುಜಿಸಿ ನಿಯಮಾವಳಿ-2010 ಅನ್ನು ಆಯ್ಕೆ ಮಾಡುವ ಸಮಯ ಮಿತಿಯನ್ನು ಹಾಗೂ ರಿಫ್ರೆಶ್ ಮತ್ತು ಓರಿಯಂಟೇಶನ್ ಕೋರ್ಸ್ನ ವಿನಾಯಿತಿಯನ್ನು 2023ರ ಡಿಸೆಂಬರ್ 31ರವರೆಗೆ ವಿಸ್ತರಿಸಲು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಸಿಂಧನಕೇರ ತಿಳಿಸಿದ್ದಾರೆ.
ನಿಯೋಗದಲ್ಲಿ ಮಹಾಸಂಘದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ನಾರಾಯಣಲಾಲ ಗುಪ್ತಾ, ಸಂಜಯ ರಾವುತ್, ಸಂಘಟನಾ ಕಾರ್ಯದರ್ಶಿ ಮಹೇಂದ್ಪ ಕಪೂರ, ಸಹ ಸಂಘಟನಾ ಕಾರ್ಯದರ್ಶಿ ಜಿ. ಲಕ್ಷ್ಮಣ, ಉಪಾಧ್ಯಕ್ಷೆ ಕಲ್ಪನಾ ಪಾಂಡೆ, ಕಾರ್ಯದರ್ಶಿ ಗೀತಾ ಭಟ್, ಪಿ. ವೆಂಕಟ ರಾವ್ ಹಾಗೂ ಮಹೇಂದ್ರ ಕುಮಾರ ಇದ್ದರು.