ಜೈಪುರ: ಅನರ್ಹತೆಯಿಂದ ಪಾರು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿರುವ ರಾಜಸ್ಥಾನ ಮಾಜಿ ಡಿಸಿಎಂ ಸಚಿನ್ ಪೈಲಟ್ ಹಾಗೂ ಅವರ ಬಣದ 18 ಶಾಸಕರು ಸದ್ಯದ ಮಟ್ಟಿಗೆ ಸೇಫ್ ಆಗಿದ್ದಾರೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಚಿನ್ ಪೈಲಟ್ ಹಾಗೂ 18 ಎಂಎಲ್ಎಗಳು ಸಲ್ಲಿಸಿದ ಅರ್ಜಿಯ ವಿಚಾರಣೆಯ ತೀರ್ಪನ್ನು ಶುಕ್ರವಾರ ನೀಡಲಿದ್ದೇವೆ. ಅಲ್ಲಿಯವರೆಗೆ ಸಚಿನ್ ಪೈಲಟ್ ಹಾಗೂ ಅವರ ಬಣದ ಶಾಸಕರ ವಿರುದ್ಧ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಬಾರದು ಎಂದು ಸ್ಪೀಕರ್ಗೆ ಸೂಚಿಸಿದೆ.
ಪಕ್ಷದಿಂದ ದೂರ ಉಳಿದು, ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ಗೈರಾದ ಸಚಿನ್ ಪೈಲಟ್ ಮತ್ತು 18 ಎಂಎಲ್ಎ ಗಳಿಗೆ ರಾಜಸ್ಥಾನ ಸ್ಪೀಕರ್ ಅನರ್ಹತೆಯ ನೋಟಿಸ್ ನೀಡಿದ್ದರು. ಅದರ ವಿರುದ್ಧ ಈ ಬಣ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಯುತ್ತಿದೆ.
ಇಂದು ಸಚಿನ್ ಪೈಲಟ್ ಹಾಗೂ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಸಚಿನ್ ಪೈಲಟ್ ಬಣದ ವಿರುದ್ಧ ಅನರ್ಹತೆ ನೋಟಿಸ್ ಜಾರಿ ಮಾಡುವಾಗ ಸ್ಪೀಕರ್ ಯಾವುದನ್ನೂ ದಾಖಲೆಯಲ್ಲಿ ಇಲ್ಲ. ಅವರಿಗೆ ಯಾಕೆ ಅನರ್ಹತೆಯ ನೋಟಿಸ್ ನೀಡಲಾಗಿದೆ ಎಂದೂ ಉಲ್ಲೇಖ ಮಾಡಿಲ್ಲ. ಅಷ್ಟೇ ಅಲ್ಲದೆ, ನೋಟಿಸ್ಗೆ ಉತ್ತರಿಸಲು ನಿಯಮದ ಪ್ರಕಾರ ಕೊಡಬೇಕಾದಷ್ಟು ಸಮಯವನ್ನೂ ಸ್ಪೀಕರ್ ಕೊಡಲಿಲ್ಲ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಆರೇಳು ತಿಂಗಳಲ್ಲಿ ಮನೆಮನೆಗೆ ರೇಷನ್: ದೆಹಲಿ ಸಚಿವ ಸಂಪುಟದಲ್ಲಿ ಅನುಮೋದನೆ
ಇನ್ನು ಸ್ಪೀಕರ್ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ಶಾಸಕರಿಗೆ ಅನರ್ಹತೆಯ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ. ಅವರನ್ನು ಸದನದಿಂದ ಅನರ್ಹ ಮಾಡುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅಷ್ಟಕ್ಕೂ ವಿಧಾನಸಭೆಯಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮ. ಅವರೇ ಮುಖ್ಯಸ್ಥರು. ಹೈಕೋರ್ಟ್ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ದಾಖಲೆಗಳನ್ನೆಲ್ಲ ಪರಿಶೀಲನೆ ಮಾಡಿದ್ದು, ಶುಕ್ರವಾರ ತೀರ್ಪು ನೀಡುವುದಾಗಿ ಘೋಷಿಸಿದೆ. ಅಲ್ಲಿಯವರೆಗೂ ಸ್ಪೀಕರ್ ಕೂಡ ತಟಸ್ಥವಾಗಿರಬೇಕು. ಸಚಿನ್ ಪೈಲಟ್ ಬಣದ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. (ಏಜೆನ್ಸೀಸ್)