ನವದೆಹಲಿ: ಸಾರ್ವಜನಿಕರಿಗೆ ನೀಡುತ್ತಿರುವ ಶಿಕ್ಷಣದಿಂದ ಸರ್ಕಾರ ಹೊರ ಬರಲು ಸಾಧ್ಯವಿಲ್ಲ ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಧನ ಸಹಾಯ ಮಾಡಲೇಬೇಕು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಾಸ್ಟೆಲ್ ಶುಲ್ಕ ಹೆಚ್ಚಳ ಪ್ರಶ್ನಿಸಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಐಶೆ ಘೋಷ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಅಭಿಪ್ರಾಯಪಟ್ಟಿತು.
ವಿವಿ ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಶುಲ್ಕ ನಿಗದಿಪಡಿಸಬೇಕು. ಅಲ್ಲಿವರೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳಬಾರದು ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ಧೀರ್ ಸೂಚಿಸಿದರು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು. ಈಗಾಗಲೇ ಶೇ.90 ವಿದ್ಯಾರ್ಥಿಗಳು ಹೊಸ ಶುಲ್ಕ ಪಾವತಿ ಮಾಡಿ ನೋಂದಾಯಿಸಿಕೊಂಡಿದ್ದಾರೆ. ಈ ಹಂತದಲ್ಲಿ ಕೋರ್ಟ್ ವಿವಿಗೆ ಮತ್ತೆ ಶುಲ್ಕ ಪರಿಷ್ಕರಣೆ ಮಾಡಿ ಎಂದು ಆದೇಶ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಶುಲ್ಕ ಪಾವತಿಗೆ ಆಯ್ಕೆಗಳೇ ಇಲ್ಲದಿದ್ದರೇ ನೀವು ಏನು ಮಾಡುತ್ತಿದ್ದೀರಿ ಎಂದು ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರನ್ನು ಪ್ರಶ್ನಿಸಿದರು.
ವಿಶ್ವವಿದ್ಯಾನಿಯಲಯ ನೇಮಕ ಮಾಡಿಕೊಂಡಿರುವ ಗುತ್ತಿಗೆ ನೌಕರರಿಗೆ ಸಂಬಳ ನೀಡಲು ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಕೋರ್ಟ್ಗೆ ವಿವಿ ಪ್ರಮಾಣ ಪತ್ರ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸರ್ಕಾರ ಸಾರ್ವಜನಿಕರಿಗೆ ನೀಡುತ್ತಿರುವ ಶಿಕ್ಷಣದಿಂದ ಹೊರ ಬರಲು ಸಾಧ್ಯವಿಲ್ಲ. ಸರ್ಕಾರ ವಿವಿಗೆ ಧನ ಸಹಾಯ ಮಾಡಬೇಕು. ಗುತ್ತಿಗೆ ಕಾರ್ಮಿಕರ ವೇತನ ಪಾವತಿಸುವ ಹೊರೆ ವಿದ್ಯಾರ್ಥಿಗಳ ಮೇಲೆ ಇರುವುದಿಲ್ಲ. ಇದಕ್ಕೆ ವಿವಿಯೇ ಆದಾಯದ ಮೂಲವನ್ನು ಹುಡುಕಿಕೊಳ್ಳಬೇಕು ಎಂದು ಅವರು ಹೇಳಿದರು. ಮುಂದಿನ ವಿಚಾರಣೆಯನ್ನು ಕೋರ್ಟ್ ಫೆ.28ಕ್ಕೆ ಮುಂದೂಡಿತು. ವಿದ್ಯಾರ್ಥಿಗಳ ಸಂಘದ ಪರವಾಗಿ ಅಭಿಕ್ ಚಿಮಣಿ ವಾದ ಮಂಡಿಸಿದರು. (ಏಜೆನ್ಸೀಸ್)