ಹಿರಿಯೂರು: ಇತಿಹಾಸ ಪ್ರಸಿದ್ಧ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಮಾಘ ಶುದ್ಧ ಪಾಡ್ಯಮಿ ಸೋಮವಾರ ಬೆಳಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿರುವ ಶಿವಧನಸನ್ನು ವೇದಾವತಿ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು.
ಬಳಿಕ ದೇಗುಲದ ಆವರಣದಲ್ಲಿ ಕರಿಯಣ್ಣ ಹಟ್ಟಿ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಗೆ ಮಘಾ ನಕ್ಷತ್ರದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಂಗಳ ವಾದ್ಯಗಳೊಂದಿಗೆ ದೇಗುಲದ ಆವರಣದಿಂದ ಉತ್ಸವ ಮೂರ್ತಿಯನ್ನು ರಥ ಬಳಿ ಕರೆ ತಂದು ಪೂಜೆ ಸಲ್ಲಿಸಿ, ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ದೇಗುಲ ಮುಂಭಾಗದ ರಾಜ ಬೀದಿಯಲ್ಲಿ ಜನರ ಹರ್ಷೋದ್ಗಾರದೊಂದಿಗೆ ರಥ ಎಳೆಲಾಯಿತು.
ಆಕರ್ಷಕ ತೇರು: ನಾಲ್ಕು ಕಲ್ಲಿನ ಗಾಲಿಗಳ 20 ಅಡಿ ಎತ್ತರಕ್ಕೆ ಬೃಹತ್ ಗೋಳಾಕಾರದ ಗೋಪುರ ನಿರ್ಮಿಸಿ ವಿವಿಧ ಬಣ್ಣಗಳ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಸ್ವಾಮಿಯನ್ನು ಹೂವುಗಳಿಂದ ಸಿಂಗರಿಸಿ, ರಥದಲ್ಲಿ ಪ್ರತಿಷ್ಠಾಪಿಸಿ ರಥಬೀದಿಯಲ್ಲಿ ಕರೆ ತರುವ ದೃಶ್ಯ ಆಸ್ತಿಕರ ಮನಸ್ಸಿನಲ್ಲಿ ಧನ್ಯತೆಯ ಭಾವ ಮೂಡಿಸಿತು.
ಹರ ಮಹಾ ದೇವ್ ಶಂಬೋ ಶಂಕರ ಎಂಬ ಭಕ್ತರ ವೇದಘೋಷಗಳು ಮುಗಿಲು ಮುಟ್ಟಿತ್ತು. ಭಕ್ತ ಗಣ ತೇರಿನತ್ತ ದವನ, ಬಾಳೆ ಹಣ್ಣು, ಎಸೆದು ಭಕ್ತಿ ಸಮರ್ಪಿಸಿದರು. ಡೊಳ್ಳು, ನಂದಿ ಕೋಲಿನ ಕುಣಿತ, ಕಹಳೆ, ಕೋಲಾಟ ಜಾತ್ರೋತ್ಸವಕ್ಕೆ ಮೆರಗು ತಂದವು.
ಸಿಪಿಐ ಚನ್ನೇಗೌಡ, ಪಿಎಸ್ಐಗಳಾದ ಅನಸೂಯಮ್ಮ, ಪರಮೇಶ್ವರ, ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಶಾಸಕಿ ಕೆ.ಪೂರ್ಣಿಮಾ, ತಹಸೀಲ್ದಾರ್ ಸತ್ಯನಾರಾಯಣ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಸಂಘ ಸಂಸ್ಥೆಗಳಿಂದ ಜಾತ್ರೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಬೆಲ್ಲದ ಪಾನಕ, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಂಸದ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಡಿ.ಸುಧಾಕರ್, ಜಿಪಂ ಸದಸ್ಯರಾದ ಶಶಿಕಲಾ ಸುರೇಶ್ಬಾಬು, ಆರ್.ನಾಗೇಂದ್ರನಾಯ್ಕ, ರಾಜೇಶ್ವರಿ, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ತಹಸೀಲ್ದಾರ್ ಸತ್ಯನಾರಾಯಣ, ನಗರಸಭೆ ಮಾಜಿ ಅಧ್ಯಕ್ಷರಾದ ಟಿ.ಚಂದ್ರಶೇಖರ್, ಈ.ಮಂಜುನಾಥ್, ಸದಸ್ಯರಾದ ಶಿವರಂಜನಿ, ಮಹೇಶ್ ಪಲ್ಲವ, ಈರಲಿಂಗೇಗೌಡ, ಸಣ್ಣಪ್ಪ, ಗುಂಡೇಶ್ ಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಾದತ್ ವುಲ್ಲಾ, ಜಿ.ಪ್ರೇಮ್ಕುಮಾರ್ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.
ಒಂದೇ ದಿನ ಮೂರು ತೇರು: ಹದಿನಾರು ದಿನಗಳ ಜಾತ್ರೆ ಕೇಂದ್ರಾಕರ್ಷಣೆ ಒಂದೇ ದಿನ ಮೂರು ತೇರು ಜರುಗಿದ್ದು. ತೇರುಮಲ್ಲೇಶ್ವರ ಸ್ವಾಮಿ, ಚಂದ್ರ ಮೌಳೇಶ್ವರ ಸ್ವಾಮಿ, ಉಮಾ ಮಹೇಶ್ವರ ಸ್ವಾಮಿಯ ರಥೋತ್ಸವ ನೆರವೇರಿತು.