ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಳಲಿದ್ದ ಸಿಲಿಕಾನ್ ಸಿಟಿ ಜನರಿಗೆ ವರುಣದೇವ ಕೃಪೆ ತೋರಿದ್ದು, ಮಳೆಯ ಸಿಂಚನದಿಂದ ಸಿಟಿ ಕೂಲ್ ಆಗಿದೆ. ಬೇಸಿಗೆಯ ಬಿಸಿಯಿಂದ ತತ್ತರಿಸಿ ಹೋಗಿದ್ದಂತ ಜನತೆಗೆ ಇಂದು ಮಳೆರಾಯನ ಆಗಮನದ ಮೂಲಕ ತಂಪೆರೆದಂತೆ ಆಗಿದೆ. ನಗರದ ಹಲವೆಡೆ ಮಳೆರಾಯ ಇಂದು (ಮೇ 03) ಕೂಡ ಆರ್ಭಟಿಸಿದ್ದಾನೆ.
ಬೆಂಗಳೂರು ನಗರದ ಚಾಮರಾಜಪೇಟೆ, ಮೆಜೆಸ್ಟಿಕ್, ರಾಜಾಜಿನಗರ, ವಿಜಯನಗರ, ಕುಮಾರಸ್ವಾಮಿ ಲೇಔಟ್, ವೈಟ್ ಫೀಲ್ಡ್, ಕೆಆರ್ ಪುರಂ ಸೇರಿದಂತೆ ವಿವಿಧ ಕಡೆ ಭಾರೀ ಮಳೆಯಾಗಿದೆ. ಮಳೆ ಬಂದ ಖುಷಿ ನೋಡಿ ಬೆಂಗಳೂರಿಗರು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ, ಮಳೆಯಲ್ಲಿ ಮಿಂದೆದ್ದಿದ್ದಾರೆ. ಇನ್ನೂ ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಸುರಿದಂತೆ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಕೆಲವೆಡೆ ಮರಗಳು ಉರುಳಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಕಳೆದ ಕೆಲ ದಿನಗಳಿಂದ ನಗರದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಗುರುವಾರ ಹಾಗೂ ಶುಕ್ರವಾರ 38 ಡಿಗ್ರಿ ದಾಖಲಾಗಿದೆ. ಬಿಸಿಲಿನ ಬೇಗೆಯಿಂದ ಬಳಲಿದ್ದ ಬೆಂಗಳೂರು ಮಂದಿಗೆ ಮಳೆರಾಯ ತಂಪೆರೆದಿದ್ದು, ಹಾಟ್ ಸಿಟಿ ಕೂಲ್ ಆಗಿದೆ. ಮಳೆಯಿಂದ ಉಷ್ಣಾಂದಲ್ಲೂ ಕೊಂಚ ಇಳಿಕೆಯಾಗಿದೆ.