ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಈ ಪಾತ್ರದ ಜನರಿಗೆ ನೀರು ನುಗ್ಗುವ ಭಯವಾದರೆ, ಪ್ರವಾಸಿಗರು ಪ್ರಾಣವನ್ನೂ ಲೆಕ್ಕಿಸದೇ ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ.
ಹೊರನಾಡು ದೇವಸ್ಥಾನ, ಹೋಂ ಸ್ಟೇಗೆ ಬರುವ ದಾರಿಯಲ್ಲಿ ಸಿಗುವ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ತುಂಬಲು ಇನ್ನು ಒಂದೆರಡು ಅಡಿಗಳಷ್ಟೇ ಬಾಕಿ ಇದೆ. ನೀರಿನಿಂದ ಸೇತುವೆ ಮುಳುಗೋ ಭಯ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಆದರೆ ಇದೇ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರು ಮಾತ್ರ ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ಗೀಳಿಗಿ ಬಿದ್ದಿರುವುದು ವಿಪರ್ಯಾಸವೇ ಸರಿ.
ಈ ಸೇತುವೆಗೆ ತಡೆಗೋಡೆ ಇಲ್ಲ, ತುಂಬಿ ಹರಿಯುತ್ತಿರುವ ನೀರು, ಮತ್ತೊಂದೆಡೆ ಸಂಚರಿಸುವ ವಾಹನಗಳಿಗೆ ಸೆಲ್ಫಿ ಪ್ರಿಯರಿಂದ ತೀವ್ರ ಅಡ್ಡಿಯಾಗುತ್ತಿದೆ. ರಸ್ತೆ ಮಧ್ಯೆ ಕಾರು ನಿಲ್ಲಿಸಿರುವುದರಿಂದ ಪ್ರವಾಸಿಗರ ವಾಹನಗಳು ನಿಂತು ಸಾಗುತ್ತಿವೆ. ಆಗಲೋ.. ಈಗಲೋ ಎಂಬುವಂತೆ ಸೇತುವೆ ಯಾವ ಕ್ಷಣದಲ್ಲಾದರೂ ಮುಳುಗಬಹುದು.
ಹೆಬ್ಬಾಳೆ ಸೇತುವೆ ಮುಳುಗಲು ಇನ್ನು 5 ಅಡಿಗಳಷ್ಟೇ ಬಾಕಿ ಇದೆ. ಕಳಸ-ಹೊರನಾಡಿಗೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಮೇಲೆ ದಿನಕ್ಕೆ ನೂರಾರು ವಾಹನಗಳು ಸಂಚರಿಸುತ್ತವೆ. ಕುದುರೆಮುಖದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಯಾವ ಕ್ಷಣದಲ್ಲಾದರೂ ಸೇತುವೆ ಮುಳುಗಬಹುದಾದ್ದರಿಂದ ಇಲ್ಲಿನ ಜನರು ಆತಂಕದಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್)
ಕಾರು-ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ಸೇರಿ ಇಬ್ಬರು ಸಾವು, ಬಾಲಕನ ಸ್ಥಿತಿ ಗಂಭೀರ