ನಾಲತವಾಡ: ಪಟ್ಟಣದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿವಿಧ ಬಡಾವಣೆಗಳಲ್ಲಿ ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳಿಗೆ ಮನೆಯಲ್ಲಿ ನೀರು ಹೊರಹಾಕುವುದೇ ದೊಡ್ಡ ಕೆಲಸವಾಗಿತ್ತು.
ಹಲವೆಡೆ ಮನೆ ಕುಸಿದಿವೆ. ಶರಣಪ್ಪ ಶೆಟ್ಟರ್ ಎಂಬುವವರ ಮನೆ ಸಂಪೂರ್ಣ ಕುಸಿದಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಪಟ್ಟಣದ ರಡ್ಡೇರ ಪೇಟೆಯ ಹಿಂಬದಿ ಜಮೀನುಗಳು ಸೇರಿ ಸುತ್ತಲಿನ ಅಂದಾಜು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಸಜ್ಜೆ, ತೊಗರಿ ನೀರಲ್ಲಿ ನಿಂತಿವೆ. ಮಳೆಯಿಂದ ಪಟ್ಟಣದಲ್ಲಿ ಮನೆಗಳು, ಬೆಳೆಗಳು ಜಲಾವೃತಗೊಂಡು ಹಾನಿಯಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಳೆ ಬಂದರೆ ಇಲ್ಲಿನ ಗಚ್ಚಿನಬಾವಿ ಓಣಿ ಜಲಾವೃತಗೊಳ್ಳುತ್ತದೆ. ಪ್ರತಿ ಮನೆಗೂ ನೀರು ನುಗ್ಗುತ್ತದೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಗ್ರಾಮಸ್ಥರ ಸಮಸ್ಯೆ ಕೇಳುತ್ತಿಲ್ಲ. ಈ ಕುರಿತು ಶೀಘ್ರ ಪತ್ರ ಬರೆಯುತ್ತೇನೆ. ಡಾ.ಎಸ್.ಬಿ.ಗಂಗನಗೌಡ್ರ, ಪಪಂ ಸದಸ್ಯ, ನಾಲತವಾಡ