ಬೆಂಗಳೂರು: ವರುಣಾಘಾತದಿಂದ ಬೆಂಗಳೂರಿನ ಬಹುತೇಕ ಭಾಗ ತತ್ತರಿಸಿ ಹೋಗಿದೆ. ಮಳೆಯಿಂದ ಸಂತ್ರಸ್ತರಾಗಿರುವ ಜನರ ಆಕ್ರೋಶಕ್ಕೆ ಗುರಿಯಾಗುವ ಮೊದಲೇ ಆಡಳಿತ ಯಂತ್ರ ಎಚ್ಚೆತ್ತಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ನೊಂದ ಕುಟುಂಬಗಳಿಗೆ ಸಾಂತ್ವಾನ ಹೇಳಿದರು. ಇದರ ಜತೆಗೆ ಪ್ರತೀ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ಘೋಷಿಸಿದರು.
ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಬೆಂಬಿಡದೇ ಕಾಡುತ್ತಿರೋ ಮಳೆರಾಯನ ಅರ್ಭಟಕ್ಕೆ ಸಿಲಿಕಾನ್ ಸಿಟಿ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ನಿನ್ನೆ ಸುರಿದ ಭಾರಿ ಮಳೆಗೆ ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗ ಸಂಪುರ್ಣ ಮುಳುಗಿ ಹೋಗಿತ್ತು. ಹೀಗಾಗಿ ಕಳೆದ ರಾತ್ರಿಯಿಂದ ಆರ್. ಅಶೋಕ್ ಕಾರ್ಯಪ್ರವೃತ್ತರಾಗಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾತ್ರಿಯೇ ಸಿಎಂ ಬಿಎಸ್ವೈಗೆ ಸಂಪೂರ್ಣ ವರದಿಯನ್ನು ಸಹ ನೀಡಿದ್ರು. ಇದಾದ ಬಳಿಕ ತುರ್ತು ಸಭೆ ನಡೆಸಿದ ಸಿಎಂ ಬಿಎಸ್ವೈ ಬಿಬಿಎಂಪಿ ಅಧಿಕಾರಿಗಳಿಗೆ ತುರ್ತು ಕ್ರಮದ ಬಗ್ಗೆ ಸೂಚನೆ ನೀಡಿದರು.
ಇದನ್ನೂ ಓದಿ: ಸಂಚಾರಿ ಪೇದೆಯ ಯೂನಿಫಾರ್ಮ್ ಹಿಡಿದು ಥಳಿಸಿದ ಮಹಿಳೆಯ ಬಂಧನ..!
ಈ ವೇಳೆ ಸಭೆಯಲ್ಲಿ ಬಿಬಿಎಂಪಿ ಆಧಿಕಾರಿಗಳಿಂದ ಸಕಲ ಮಾಹಿತಿ ಪಡೆದ ಸಿಎಂ ತುಮಕೂರಿಗೂ ತೆರಳುವ ಮುನ್ನ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿಗೆ ತೆರಳಲು ತಿರ್ಮಾನಿಸಿ, ಹೋಗುವ ಮುನ್ನ ತಕ್ಷಣವೇ ಹಾನೀಗೀಡದವರಿಗೆ 25 ಸಾವಿರ ರೂ. ಪರಿಹಾರವನ್ನ ಘೋಷಿಸಿದ್ರು..
ತುರ್ತ ಸಭೆಯ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಿಎಂ ನೇರವಾಗಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದರು. ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ, ಕುಮಾರಸ್ವಾಮಿ ಲೇ ಔಟ್, ಬಸವನಗುಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ದತ್ತಾತ್ರೇಯ ನಗರದಲ್ಲಿ ಸಿಎಂ ವೀಕ್ಷಣೆ ಮುಗಿಸಿ ಹೊರಡುವ ವೇಳೆ ಸ್ಥಳೀಯರ ಸಹನೆಯ ಕಟ್ಟೆ ಹೊಡೆದಿತ್ತು.
ಈ ವೇಳೆ ಕೆಲ ಸ್ಥಳೀಯರು ಸ್ಥಳಕ್ಕೆ ಬಂದ್ರೆ ಸಾಲದು ಶಾಶ್ವತವಾಗಿ ಪರಿಹಾರ ಒದಗಿಸಬೇಕೆಂದು ಸಿಎಂಗೆ ಆಗ್ರಹಿಸಿದರು. ಈ ವೇಳೆ ಸ್ವತಃ ಸಿಎಂ ಮತ್ತೆ ಕಾರಿನಿಂದ ಕೆಳಗಿಳಿದು ಬಂದು ಸ್ಥಳೀಯರ ಸಮಸ್ಯೆ ಆಲಿಸಿದರು. ಪುನಃ ದತ್ತಾತ್ರೇಯ ಬಡಾವಣೆ ವೀಕ್ಷಣೆ ಮಾಡಿ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವಂತೆ ಸೂಚಿಸಿದರು. ಜತೆಗೆ ಪರಿಹಾರದ ಹಣವನ್ನು ಸಂಜೆಯೇ ಡೌರ್ ಟು ಡೌರ್ ತಲುಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇದನ್ನೂ ಓದಿ: ಕರೊನಾ ಲಸಿಕೆ ಬಂದ ತಕ್ಷಣ ಮೊದಲ ಆದ್ಯತೆ ಆರೋಗ್ಯ ಸಿಬ್ಬಂದಿಗೆ..; ಸಚಿವ ಡಾ.ಕೆ. ಸುಧಾಕರ್
ಕುಮಾರಸ್ವಾಮಿ ಲೇಔಟ್ ಹಾಗೂ ಬಸವನಗುಡಿ ಸೇರಿದಂತೆ ಅನೇಕ ಕಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ಯಾರು ಸಹ ಧೈರ್ಯ ಗೆಡದಂತೆ ಸಿಎಂ ಸ್ಥಳೀಯರಿಗೆ ಮನವಿ ಮಾಡಿದರು.